ಶಿವಮೊಗ್ಗ 

ತೀರ್ಥಹಳ್ಳಿ ಪ್ರಸಿದ್ದ ದೇವಸ್ಥಾನದ ಹುಂಡಿ ಕಳುವಿಗೆ ಯತ್ನ

ತೀರ್ಥಹಳ್ಳಿ : ಪುರಾಣ ಪ್ರಸಿದ್ದ ತೀರ್ಥಹಳ್ಳಿಯ  ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನದ ಯತ್ನ ನಡೆದಿದೆ. ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿ ಒಡೆದಿದ್ದಾರೆ. ಬಳಿಕ ಹುಂಡಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಬೀಗ ಒಡೆಯಲು ಪ್ರಯತ್ನಿಸಿದ್ದಾರೆ. ಶಬ್ದ ಕೇಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಬಂದಾಗ ಹುಂಡಿ ಬಿಟ್ಟು ಕಳ್ಳರು ಎಸ್ಕೇಪ್ ಆಗಿದ್ದಾರೆಂದು ತಿಳಿದುಬಂದಿದೆ. ಇನ್ನು ಈ ಕೃತ್ಯದಲ್ಲಿ ಇಬ್ಬರು ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಹೃದಯಾಘಾತದಿಂದ ಸಾವು

ಭದ್ರಾವತಿ : ನಗರಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಜಪ್ಪ ಲೇಔಟ್ - ಹೊಸ ಸಿದ್ದಾಪುರದಲ್ಲಿ (ವಾರ್ಡ್ ಸಂಖ್ಯೆ 29) ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ ಸಾವನ್ನಪ್ಪಿದ್ದಾರೆ. ಶೃತಿ ಅವರ ಸಾವಿಗೆ ಜಿಲ್ಲಾ ಕಾಂಗ್ರೆಸ್ ಸಂತಾಪ ಸೂಚಿಸಿದೆ

 ಮಾಸ್ಕ್  ಧರಿಸಿ,  ಸಾಮಾಜಿಕ  ಅಂತರ   ಕಾಯ್ದುಕೊಳ್ಳಿ,  ನಿಮ್ಮ  ಸುರಕ್ಷತೆಯಲ್ಲಿ  ನೀವಿರಿ    -  ಇದು   ನ್ಯೂಸ್   ಮಲ್ನಾಡ್   ಕಳಕಳಿ 

ಹಾಸನ

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 100 ಕ್ಕೂ ಹೆಚ್ಚು ಜನರಿಗೆ ತಗುಲಿದ ಸೋಂಕು?

ಹಾಸನ: ಹಾಸನ ಜಿಲ್ಲೆಯಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದ ವರಿಷ್ಠಾಧಿಕಾರಿಗಳಿಗೆ ಕೊರೋನಾ ಸೋಂಕು ತಗಲಿದ್ದು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲ 130 ಮಂದಿಗೂ ಸೋಂಕು ತಗುಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ಹಾಸನ ಜಿಲ್ಲೆಯ ಆಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎ. 10ರಂದು ರಾತ್ರಿ ನಡೆದಿದ್ದ ರೇವ್‌ ಪಾರ್ಟಿ ಮೇಲೆ ದಾಳಿ ಮಾಡಿದ್ದ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್‌ ಮತ್ತು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.

ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮಹಿಳಾ ಪೇದೆ ಅಮಾನತು ಮಾಡಿ ಆದೇಶ ಹೊರಡಿಸಿದ ಕಮಿಷನರ್

ಹಾಸನ : ಜಿಲ್ಲೆಯ ಆಲೂರು ನಂದಿಪುರ ಎಸ್ಟೇಟ್ ರೆಸಾರ್ಟ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಗರ ಪೊಲೀಸ್ ಠಾಣಾ ಮಹಿಳಾ ಕಾನ್‌ಸ್ಟೇಬಲ್‌ನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯ ಆಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎ. 10ರಂದು ರಾತ್ರಿ ನಡೆದಿದ್ದ ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪಕ್ಕೆ ಸಿಲುಕಿರುವ ನಗರದ ಇಕನಾಮಿಕ್‌ ಆ್ಯಂಡ್‌ ನಾರ್ಕೊಟಿಕ್‌ ಕ್ರೈಂ ಠಾಣೆಯ ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ.

ಚಿಕ್ಕಮಗಳೂರು ;

ಶೃಂಗೇರಿ ಮಠಕ್ಕೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಭೇಟಿ

ಚಿಕ್ಕಮಗಳೂರು : ಶೃಂಗೇರಿ ಶಾರದಾ ಪೀಠದಲ್ಲಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಜಿಗಳ 71 ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿರುವ ಆಯುತ ಚಂಡೀ ಮಹಾಯಾಗದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪಾಲ್ಗೊಂಡಿದ್ದಾರೆ. ಸುಮಾರು 11:15 ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ಆಗಮಿಸಿದ ಸಚಿವರನ್ನು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಿ. ಎನ್ ಜೀವರಾಜ್, ಶೃಂಗೇರಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ ಬರಮಾಡಿಕೊಂಡರು. ನಂತರ ಶೃಂಗೇರಿ ಮಠಕ್ಕೆ ತೆರಳಿ ಉಭಯ ಜಗದ್ಗುರುಗಳ ಆಶಿರ್ವಾದ ಪಡೆದ ಬಳಿಕ ವರ್ಧಂತಿ ಮಹೋತ್ಸವ ಹಿನ್ನಲೆ ಏರ್ಪಡಿಸಿದ್ದ ಆಯುತ ಚಂಡೀ ಮಹಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.

ಜಿಲ್ಲೆಯಲ್ಲಿ ಒಂದೇ ದಿನ ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕೋರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊರೋನಾ ಅಪ್ ಡೇಟ್ಸ್ ಇಲ್ಲಿದೆ ;

  1. ಒಟ್ಟು ಸಕ್ರಿಯ ಪ್ರಕರಣಗಳು : 649
  2. ಇದುವರೆಗು ಪತ್ತೆಯಾದ ಸೋಂಕಿತರು : 15,191
  3. ಗುಣಮುಖರಾದವರ ಸಂಖ್ಯೆ ; 14,400
  4. ಮೃತಪಟ್ಟವರ ಸಂಖ್ಯೆ : 142

 ಮಾಸ್ಕ್  ಧರಿಸಿ,  ಸಾಮಾಜಿಕ  ಅಂತರ   ಕಾಯ್ದುಕೊಳ್ಳಿ,  ನಿಮ್ಮ  ಸುರಕ್ಷತೆಯಲ್ಲಿ  ನೀವಿರಿ   - ಇದು  ನ್ಯೂಸ್   ಮಲ್ನಾಡ್  ಕಳಕಳಿ 

ಕೊಡಗು

ಜಲಪಾತದಲ್ಲಿ ಬಿದ್ದು ಇಬ್ಬರು ಸಾವು

ಮಡಿಕೇರಿ: ಜಲಪಾತಕ್ಕೆ ಬಿದ್ದು ಇಬ್ಬರು ದಾರುಣ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ನಡೆದಿದೆ. ಭಾನುವಾರ ನಡೆದ ಘಟನೆಯಲ್ಲಿ ಸುಂಟಿಕೊಪ್ಪದ ಶಶಿಕುಮಾರ್​ (32) ಮತ್ತು ದಿವ್ಯ (20) ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 9.30 ಗಂಟೆ ಸುಮಾರಿಗೆ ವೀಕೆಂಡ್​ ಹಿನ್ನೆಲೆಯಲ್ಲಿ ಆರು ಜನರ ತಂಡ ಜಲಪಾತಕ್ಕೆ ಆಗಮಿಸಿದ್ದು ಈ ವೇಳೆ ದಿವ್ಯಾ ಆಯತಪ್ಪಿ ಜಲಪಾತಕ್ಕೆ ಬಿದ್ದಿದ್ದಾಳೆ. ಈ ವೇಳೆ ನೀರಿನಲ್ಲಿ ಬೀಳುತ್ತಿದ್ದ ದಿವ್ಯಾಳನ್ನು ರಕ್ಷಿಸಲು ತೆರಳಿದ ಶಶಿಕುಮಾರ್ ಸಹ ಸಾವಿಗೀಡಾಗಿದ್ದಾರೆ.

ಉತ್ತರ ಕನ್ನಡ 

ತುಳು ನಾಡಿನ ಹಬ್ಬ ಈಗ ಉತ್ತರ ಕನ್ನಡದಲ್ಲಿ

ತುಳುನಾಡಿನಲ್ಲಿ ದೇವರಿಗೆ ನೇಮೋತ್ಸವ ನಡೆಯುವುದು ಸಾಮಾನ್ಯ. ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜ ಕಲ್ಲೂರ್ಟಿ, ಪಂಜುರ್ಲಿ ಸೇರಿದಂತೆ ಇತರ  ಕಾರ್ಣಿಕ  ದೈವಗಳ ಆರಾಧನೆ ಮಾಮೂಲಿಯಾಗಿ ನಡೆಯುತ್ತಿರುತ್ತದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸಿರಿಸಿಂಗಾರ ನೇಮೋತ್ಸವ ನಡೆಯಿತು.  ಭಕ್ತರ ಮುಂದೆ ಅಗ್ನಿಯ ಹಿಡಿದು ನರ್ತಿಸುತ್ತಿರುವ ದೈವ ರೂಪ. ಭಕ್ತಿಯಿಂದ ದೇವರ ಉತ್ಸವದಲ್ಲಿ ಪಾಲ್ಗೊಂಡ ಭಕ್ತರು. ರಾಜ್ಯದ ಕರಾವಳಿ ಜಿಲ್ಲೆಯ ಉತ್ತರಕನ್ನಡದಲ್ಲೂ  ಈಗ ತುಳುನಾಡಿನ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಭಟ್ಕಳ ತಾಲೂಕಿನ ಬೆಳ್ಕೆ ಗ್ರಾಮದ  ಕೆಕ್ಕೊಡ್‌  ನೂಜಿನಲ್ಲಿ ತುಳುನಾಡಿನಲ್ಲಿ ಪ್ರಸಿದ್ದವಾಗಿರುವ ಸಿರಿಸಿಂಗಾರ ನೇಮೋತ್ಸವ ನಡೆಯಿತು. ಸುಮಾರು 457 ವರ್ಷಗಳ ಇತಿಹಾಸವುಳ್ಳ ದಕ್ಷಿಣ ಕನ್ನಡದ ದೈವ ಕಲ್ಲೂರ್ಟಿ ದೈವಕ್ಕೆ ಸಿರಿ ಸಿಂಗಾರ ನೇಮೋತ್ಸವವನ್ನು ಉತ್ತರಕನ್ನಡದ ಪ್ರಪ್ರಥಮ ಬಾರಿಗೆ ನಡೆದಿದೆ.

 ಮಾಸ್ಕ್  ಧರಿಸಿ,  ಸಾಮಾಜಿಕ  ಅಂತರ   ಕಾಯ್ದುಕೊಳ್ಳಿ,  ನಿಮ್ಮ  ಸುರಕ್ಷತೆಯಲ್ಲಿ  ನೀವಿರಿ   - ಇದು  ನ್ಯೂಸ್   ಮಲ್ನಾಡ್  ಕಳಕಳಿ