ಶಿರಸಿ: ನಾಡಿನ ಹೆಸರಾಂತ ವಿದ್ವಾಂಸ, ವಾಗ್ಮಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಶೃಂಗೇರಿ ಜಗದ್ಗುರು ಪೀಠಾಧಿಪತಿ ಶ್ರೀಭಾರತೀತೀರ್ಥ ಪುರಸ್ಕಾರ ಪ್ರಕಟವಾಗಿದೆ.
ಸಂಸ್ಕೃತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅನವರತ ಕಾರ್ಯಮಾಡಿದ ದೇಶದ ಎಪ್ಪತ್ತು ವಿದ್ವಾಂಸರಿಗೆ ನೀಡುವ ಪುರಸ್ಕಾರ ಇದಾಗಿದ್ದು, ಅವರಲ್ಲಿ ಉಮಾಕಾಂತರೂ ಒಬ್ಬರಾಗಿದ್ದಾರೆ. ಒಂದು ಲಕ್ಷ. ರೂ. ನಗದು, ಪುರಸ್ಕಾರ ಪತ್ರ, ಸ್ಮರಣಿಕೆ, ಶಾಲು ಒಳಗೊಂಡಿದೆ. ಏ.೧೯ರಂದು ಶೃಂಗೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಆಗಲಿದೆ.
ಶೃಂಗೇರಿ ಜಗದ್ಗುರು ಪೀಠಾಧಿಪತಿ ಶ್ರೀಭಾರತೀತೀರ್ಥ ಮಹಾಸ್ವಾಮೀಜಿಗಳ ೭೧ನೇ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ದೇಶದಲ್ಲಿ ಅನವರತ ಸಾಧನೆ ಮಾಡಿದ ೭೦ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವದು ವಿಶೇಷವಾಗಿದೆ.
ಮೂಲತಃ ತಾಲೂಕಿನ ಕೆರೇಕೈ ನಿವಾಸಿಯಾದ ಉಮಾಕಾಂತ ಭಟ್ಟ ಅವರು ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವಾ ನಿವೃತ್ತರಾಗಿದ್ದಾರೆ. ಚತುರ್ಭಾಷಾ ಪಂಡಿತರಾಗಿ, ಪ್ರವಚನಗಳ ಮೂಲಕವೂ ಗಮನ ಸೆಳೆದ, ತಾಳಮದ್ದಲೆ ಪ್ರಸಿದ್ದ ಅರ್ಥದಾರಿ ಉಮಾಕಾಂತ ಭಟ್ಟ ಅವರು ಪ್ರಾಚೀನ ನ್ಯಾಯ ಶಾಸ್ತ್ರ ಹಾಗೂ ನವೀನ ನ್ಯಾಯ ಶಾಸ್ತ್ರಗಳ ಪಂಡಿತರು. ಅನೇಕ ಕೃತಿ ರಚಿಸಿದ, ಸಂಪಾದಿಸಿದ ಕೆರೇಕೈ ಅವರು ವಿಶ್ವದ ಏಕೈಕ ಛಂಧೋಬದ್ದ ಸಂಸ್ಕೃತ ಪತ್ರಿಕೆಯ ಸಂಪಾದಕರು, ಸ್ಥಾಪಕರು ಎಂಬುದು ವಿಶೇಷ.
ಬನ್ನಂಜೆ ಪ್ರಶಸ್ತಿ, ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿಗಳೂ ಸೇರಿದಂತೆ ಅನೇಕ ಸಮ್ಮಾನಗಳು ಸಂದಿವೆ ಎಂಬುದು ಉಲ್ಲೇಖನೀಯ.


0 Comments