ಗ್ರಾಮೀಣ ಪ್ರದೇಶದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾಫಿ ನಾಡು ಚಿಕ್ಕಮಗಳೂರನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಕುರಿತು ತುರ್ತು ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದಾರೆ.

ನಾಳೆ ಬೆಳಗ್ಗೆ 10 ಗಂಟೆಯಿಂದ ಮೇ 24ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ತುರ್ತು ಮೆಡಿಕಲ್ ಸೇವೆ ಹೊರತುಪಡಿಸಿ ವಾಹನ ಸಂಚಾರ ಕಂಪ್ಲೀಟ್ ಬಂದ್ ಆಗಿರಲಿದೆ. ಈಗಾಗಲೇ ಅನುಮತಿ ಪಡೆದಿರುವ ಮದುವೆ ಕಾರ್ಯಕ್ರಮಗಳಿಗೆ ಕೇವಲ 10 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಬ್ಯಾಂಕಿನ ಸಿಬ್ಬಂದಿಗಳು ತೆರಳಬಹುದಾಗಿದ್ದರೂ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ಸಂಪೂರ್ಣ ಬಂದ್ ಆಗಿರಲಿದೆ. ದಿನಸಿ ಅಂಗಡಿಗಳು ಕೂಡ ತೆಗೆಯಲು ಅವಕಾಶವಿಲ್ಲ ಆದರೆ ಹತ್ತಿರದ ಅಂಗಡಿಗಳಲ್ಲಿ ಹಾಲು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹೊರಗಿನಿಂದ ಬಂದವರು ಚೆಕ್ ಪೋಸ್ಟ್ ನಲ್ಲಿ ಅವರ ಸಂಪೂರ್ಣ ಮಾಹಿತಿ ನೀಡಿ, 14 ದಿನ ಕ್ವಾರಂಟೈನ್ ನಲ್ಲಿರಬೇಕು. ಈ ಕುರಿತು ಪ್ರತಿಕ್ರಿಸಿರುವ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಜನರ ಹಿತದೃಷ್ಟಿಯಿಂದ ಚಿಕ್ಕಮಗಳೂರು ಸಂಪೂರ್ಣ ಲಾಕ್ ಡೌನ್ ಮಾಡಲು ಉಸ್ತುವಾರಿ ಸಚಿವರಾದ ಅಂಗಾರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ, ಇದು ಮೇ 31 ರ ತನಕವೂ ಮುಂದುವರೆಯಬಹುದು ಎಂದಿದ್ದಾರೆ.

ಕೊಪ್ಪ ತಾಲೂಕು ಪಂಚಾಯಿತಿ ಸಂಪೂರ್ಣ ಸೀಲ್ ಡೌನ್ ಗೆ ಆದೇಶ:

ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ತಾಲೂಕು ಪಂಚಾಯಿತಿ ಕಛೇರಿಯ 10 ಜನ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ತಾಲೂಕು ಪಂಚಾಯತಿ ಕಛೇರಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.