ಸೈನಿಕನ ಕುಟುಂಬದ ಮೇಲಿನ ಹಲ್ಲೆಯನ್ನು ಖಂಡಿಸಿ ಇಂದು ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ನಿವೃತ್ತ ಸೈನಿಕರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಕಾರ್ಗಿಲ್ ವಿಜಯ್ ದಿವಸದ ಮುನ್ನಾ ದಿನವಾದ 25 ಜುಲೈ ಸಂಜೆ ಬೋಯಿಕೆರೆ ಸಮೀಪ ರಜೆಯಲ್ಲಿದ್ದ ಅಶೋಕ್ ಎಂಬ ಯೋಧ ಕುಟುಂಬದೊಂದಿಗೆ ಮಡಿಕೇರಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಸಣ್ಣ ಅಪಘಾತವೊಂದು ನಡೆದಿತ್ತು. ಅಪಘಾತದ ನಂತರ ಮಾತಿಗೆ ಮಾತು ಬೆಳೆದು, ಅಪಘಾತದಲ್ಲಿ ಯೋಧನ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ ಕಾಂಗ್ರೆಸ್ ಮುಖಂಡ ರಫೀಕ್ ಎಂಬಾತ ಹಲವರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದಾನೆ. ನಂತರ ಗುಂಪು ಕಟ್ಟಿಕೊಂಡು ಯೋಧನಿಗೆ ಹಾಗೂ ಕುಟುಂಬ ಸದಸ್ಯರಿಗೆ ಹಲ್ಲೆ ನಡೆಸಿ ಯೋಧನ ಪತ್ನಿಯ ತಾಳಿ ಸರ, ಉಂಗುರ, ಚೈನ್ ದೋಚಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಹಲ್ಲೆಗೊಳಗಾದ ಯೋಧನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಪೆಟ್ಟಾಗಿರುವ ಯೋಧನ ತಂದೆಯನ್ನು ಬೆಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೋಲೀಸರು ಇದುವರೆಗೂ ಕಾಂಗ್ರೆಸ್ ಮುಖಂಡ ರಫೀಕ್, ಜೆಡಿಎಸ್ ಮುಖಂಡ ಇಸಾಕ್, ಹಾಗೂ ಬಷೀರ್ ನನ್ನು ಬಂಧಿಸಿದ್ದರು.ಆದರೆ ಬಂಧಿತ ಆರೋಪಿಗಳು ಒಂದೇ ದಿನದಲ್ಲಿ ಜಾಮೀನು ಪಡೆದು ಹೊರಬಂದಿದ್ದರು.
ಸೈನಿಕ ಎಂದು ತಿಳಿದು ಉದ್ಧೇಶಪೂರ್ವಕವಾಗಿ ಹಲ್ಲೆ, ಆರೋಪ:
ಅಪಘಾತದ ನಂತರ ಸೈನಿಕ ಎಂದು ತಿಳಿದ ನಂತರ, ಜನರನ್ನು ಒಗ್ಗೂಡಿಸಿ ಉದ್ಧೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಸಹ ಆರೋಪಿಸಲಾಗಿದೆ.
ಪ್ರತಿಭಟನೆ ಸ್ಥಳಕ್ಕೆ ಬಾರದ ಅಧಿಕಾರಿಗಳು, ಆಕ್ರೋಶ: ಸೈನಿಕನ ಮೇಲಿನ ಹಲ್ಲೆಗೆ ಸಂಬಂಧ ಪಟ್ಟಂತೆ ಕರ್ನಾಟಕ ಮಾಜಿ ಸೈನಿಕರ ಸಂಘ, ಕೊಡಗು ಮಾಜಿ ಸೈನಿಕರ ಸಂಘ, ಹಿಂದೂ ಪರ ಸಂಘಟನೆಗಳು ಮತ್ತು ಸಮಾನ ಮನಸ್ಕರು ಸುಮಾರು 1500ಕ್ಕೂ ಹೆಚ್ಚು ಜನ ಪ್ರತಿಭಟನೆ ಮಾಡುತ್ತಿದ್ದರೂ ಸಹ ಮೂರು ಘಂಟೆಗಳಿಂದ ಅಹಾವಲು ಸ್ವೀಕರಿಸಲು ಬಾರದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಸ್ಥಳೀಯ ಶಾಸಕರು ಬಂದ ನಂತರವೇ ಅಧಿಕಾರಿಗಳು ಸಹ ಬಂದಿದ್ದು, ಸೈನಿಕರಿಗಿಂತ ಹೆಚ್ಚು ರಾಜಕಾರಣಿಗಳಿಗೆ ಗೌರವ ಕೊಡುವುದು ಅಧಿಕಾರಿಗಳ ಸಂಸ್ಕಾರವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಕಾರ್ಗಿಲ್ ವಿಜಯ ದಿವಸ್ ಆಚರಣೆ ತಡೆಯುವ ಉದ್ಧೇಶದಿಂದಲೇ ಈ ಹಲ್ಲೆ ನಡೆಸಿರುವ ಸಾಧ್ಯತೆ ಇದೆ, ಈ ಕುರಿತು ಸೂಕ್ತ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳ ವಿರುದ್ಧ ಒಂದು ವಾರದ ಒಳಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ತೀವ್ರ ತರಹದ ಹೋರಾಟಕ್ಕೆ ಇಳಿಯಲಾಗುವುದು"
- ಸತ್ಯ ಕರ್ಕೇರ





0 Comments