ಭಾರತೀಯ ಜನತಾ ಪಾರ್ಟಿ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನದ ಪ್ರಯುಕ್ತ, ಚಿಕ್ಕಮಗಳೂರು ತಾಲೂಕಿನ ಮಾಣಿಕ್ಯದಾರದಲ್ಲಿ ನೆನ್ನೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಯುವ ಮೋರ್ಚಾ ನೇತೃತ್ವದಲ್ಲಿ ಸ್ವಚ್ಛ ಭಾರತ ಸ್ವಸ್ಥ ಭಾರತ ಅಭಿಯಾನದ ಅಡಿಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೊಟ್ಯಾನ್, ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಮನುಷ್ಯನು ಪ್ರಕೃತಿಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾನೆ. ಇದು ಸರಿಯಲ್ಲ ನಾವು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕಬೇಕು. ನಮ್ಮ ಬಟ್ಟೆ, ಕೈ ಕಾಲು ಕೊಳಕಾದರೆ ನಮಗೆ ಹೇಗೆ ಕಷ್ಟ ಎನಿಸುತ್ತದೆಯೋ ಅದೇ ಭಾವನೆ ಪರಿಸರದ ಕುರಿತೂ ನಮ್ಮಲ್ಲಿ ಮೂಡಬೇಕು.

ಜಿಲ್ಲೆಯಲ್ಲಿ ರಾಜ್ಯ ಯುವ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಸ್ಥ ಭಾರತ - ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ  ನಡೆದಿರುವಂತಹ ಕಾರ್ಯಕ್ರಮವು ಇದಾಗಿದ್ದು, ಪರಿಸರ ನಾಶ, ನದಿಗಳ ಮಾಲಿನ್ಯ ಇವುಗಳಿಂದ ದೇಶದಲ್ಲಿ ಸ್ವಾಭಾವಿಕವಾಗಿ ಆಕ್ಸಿಜನ್ ಕೊರತೆ ಉಂಟಾಗಿದೆ. ಮನುಷ್ಯನ ದುರಾಸೆಯಿಂದ ನಾವು ಈ ಹಂತಕ್ಕೆ ತಲುಪಿದ್ದೇವೆ ಇದನ್ನು ಮನಗಂಡು ಯುವ ಮೋರ್ಚಾ ನೇತೃತ್ವದಲ್ಲಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಗಿಡ ನೆಡುವ ಕಾರ್ಯಕ್ರಮ ರೂಪಿಸಿದ್ದು, ಹಾಗೆಯೇ ಇಂದು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನದಿ ಮೂಲಗಳು ಕಲ್ಯಾಣಿ, ಬಾವಿ ಕಟ್ಟೆಗಳನ್ನು ಸ್ವಚ್ಛ ಮಾಡುವ ಮೂಲಕ ಚಿಕ್ಕಮಗಳೂರು ಯುವ ಮೋರ್ಚಾ ಮಾದರಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಕಾರ್ಯಕ್ರಮಗಳು ನಡೆದಿದ್ದು ಸುಮಾರು ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು ಎಂದರು.

ಈ ಕಾರ್ಯಕ್ರಮದಲ್ಲಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಹರ್ಷಿತ್ ವೆಂಕಟೇಶ್, ಜಿಲ್ಲಾಧ್ಯಕ್ಷರಾದ ಸಂದೀಪ್, ಚಿಕ್ಕಮಗಳೂರು ನಗರ ಮಂಡಲ ಅಧ್ಯಕ್ಷರಾದ ಮಧುರಾಜ್ ಅರಸ್ ಬಿಜೆಪಿ ಜಿಲ್ಲಾ ವಕ್ತಾರರಾದ ವರಸಿದ್ದಿ ವೇಣುಗೋಪಾಲ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸಚಿನ್, ಕಾರ್ಯದರ್ಶಿಗಳಾದ ಸಂಜು, ಶಶಿ ಆಲ್ದೂರು, ಅದರ್ಶ್, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಕಿರಣ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು