ಶಿವಮೊಗ್ಗ:(ನ್ಯೂಸ್ ಮಲ್ನಾಡ್ ವರದಿ) ಹುಣಸೋಡು ಸ್ಫೋಟದ ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ಸಂತ್ರಸ್ತರು ಪಾದಯಾತ್ರೆಯನ್ನು ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತರಿಗೆ ಪರಿಹಾರ ಮತ್ತು ಈ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐ ಗೆ ವಹಿಸಬೇಕೆಂದು ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಸಂತ್ರಸ್ತರು ಬುಧವಾರ ಪಾದಯಾತ್ರೆಯನ್ನು ನಡೆಸಿದರು.

ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಗ್ರಾಮದಲ್ಲಿ 2021 ಜನವರಿ 21 ರಂದು ರಾತ್ರಿ ಕಲ್ಲುಕ್ವಾರೆಗಳಿಗೆ ಪೂರೈಸಲು ತಂದಿದ್ದ ಸಿಡಿಮದ್ದುಗಳು ಸ್ಫೋಟಗೊಂಡು 6 ಜನ ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು, ಸಿಡಿಮದ್ದುಗಳು ಸ್ಫೋಟಗೊಂಡಿದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ಮನೆಗಳಿಗೆ ಅಪಾರವಾದ ಹಾನಿಯುಂಟಾಗಿತ್ತು ಹಾಗೂ ಕೆಲವು ಗ್ರಾಮಸ್ಥರ ಕಿವಿಯ ತಮಟೆಗೂ ಧಕ್ಕೆಯುಂಟಾಗಿತ್ತು.

ಹಾನಿಗೊಳಗಾದ ಮನೆಗಳ 850 ಸಂತ್ರಸ್ತರು ಪರಿಹಾರವನ್ನು ನೀಡಲು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು, ಘಟನೆ ನಡೆದು 8 ತಿಂಗಳು ಆಗಿದ್ದರೂ ಜಿಲ್ಲಾಡಳಿತ ಸಂತ್ರಸ್ತರಿಗೆ ಇನ್ನೂ ಪರಿಹಾರವನ್ನು ನೀಡಿಲ್ಲ, ಅವರು ಸರಿಯಾಗಿ ಪರಿಶೀಲನೆ ನಡೆಸದೆ ಪ್ರತಿಮನೆಗಳು ಕೇವಲ ಶೇ 10 ರಷ್ಟು ಹಾನಿಯಾಗಿದೆ ಎಂದು ವರದಿಯನ್ನು ನೀಡಿದೆ ಅದರ ಪರಿಹಾರವನ್ನು ಸಹ ನೀಡಿಲ್ಲ ಎಂದು ಪಾದಯಾತ್ರೆಯಲ್ಲಿಯೇ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಿದ್ದಾರೆ.