ಚಿಕ್ಕಮಗಳೂರು :  ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಅಕ್ರಮ ಮರಳು ಸಾಗಾಟದ ಗಂಭೀರ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ತಮ್ಮ ನೂತನ ಮನೆಯ ನಿರ್ಮಾಣ ಕಾರ್ಯಕ್ಕೆ ಅಕ್ರಮವಾಗಿ ಮರಳು ಬಳಸಿದ್ದಾರೆ ಎಂಬ ದೂರು ಸ್ಥಳೀಯರು ಮಾಡಿದ್ದಾರೆ, ಹಾಗೂ ಈ ಕುರಿತು ವಿಡಿಯೋ ಕೂಡ ಸಂಗ್ರಹಿಸಿದ್ದಾರೆ.

ಮೂಡಿಗೆರೆ ಸಮೀಪದ ಕೆಲ್ಲೂರು ಗ್ರಾಮದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಕೋಟ್ಯಾಂತರ ರೂ. ಬೆಲೆ ಬಾಳುವ ಮನೆ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಣ ಕಾರ್ಯಕ್ಕೆ ವಾರದಲ್ಲಿ ಹತ್ತರಿಂದ ಹದಿನೈದು ಲೋಡ್ ಮರಳನ್ನು ಅಕ್ರಮವಾಗಿ ತರಲಾಗುತ್ತದೆ ಎಂಬ ಗಂಭೀರ ಆರೋಪ ಕಾಂಗ್ರೆಸ್ ಮುಖಂಡ ಚಂದ್ರು ಓಡೆಯರ್ ಮಾಡಿದ್ದಾರೆ.

ತಾಲೂಕಿನ ಉದುಸೆ ಎಂಬಲ್ಲಿ ಮರಳು ಕ್ವಾರೆಯಿದೆ. ಮಳೆಗಾಲದ ಸಮಯ ಆದ್ದರಿಂದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಮರಳು ತೆಗೆಯಲು ನಿರ್ಬಂಧವನ್ನು ವಿಧಿಸಿದ್ದಾರೆ. ಸಮೀಪದ ಮುಗ್ರಹಳ್ಳಿ ಬಳಿ ಕಳ್ಳ ಮಾರ್ಗದಲ್ಲಿ ಮರಳನ್ನು ಕದ್ದು ತರಲಾಗುತ್ತಿದೆ. ಶಾಸಕರ ಮನೆಯ ಕಾರ್ಯಕ್ಕೆ ಮುಗ್ರಿಹಳ್ಳಿಯ ಮರಳನ್ನು ಬಳಸಲಾಗುತ್ತಿದೆ ಎಂದು ದೂರಿದ್ದಾರೆ.

ಮೂಡಿಗೆರೆ ಶಾಸಕರ ಮನೆಗೆ ಕದ್ದು ಮರಳು ಸಾಗಿಸುತ್ತಿರುವುದನ್ನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಅಕ್ರಮವಾಗಿ ಮರಳು ಲೂಟಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿ ವರ್ಗದವರು ಮಾತ್ರ ಈ ಕುರಿತು ಏನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.