ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಸಮರ್ಪಕವಾದ ರಸ್ತೆ ಇಲ್ಲದೆ ಅನಾರೋಗ್ಯಪೀಡಿತ ವೃದ್ಧೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ ಮನಕಲಕುವ ಘಟನೆ ನಡೆದಿದೆ.

ಕಳಸ ತಾಲೂಕಿನ ಕಳಕೋಡು ಗ್ರಾಮದಿಂದ ಈಚಲು ಹೊಳೆವರೆಗೆ ಅಂದಾಜು ನಾಲ್ಕು ಕಿಲೋಮೀಟರ್ ಗಳಷ್ಟು ದೂರ ವೃದ್ಧೆಯನ್ನು ಜೋಳಿಗೆಯ ಮುಖಾಂತರ ಹೊತ್ತೊಯ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ದೃಶ್ಯವು ಬಹಳ ವಿದ್ರಾವಕವಾದದ್ದು, ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯ ನಡುವೆಯೇ ವೃದ್ಧೆಯನ್ನು ಸಂಬಂಧಿಕರು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಬೈಕ್ ಆಂಬುಲೆನ್ಸ್ ಕೂಡ ಈ ದಾರಿಯಲ್ಲಿ ಸಾಗಲಾರದು, ಕಾಲುದಾರಿಯ ಮುಖಾಂತರವೇ ಪ್ರತಿಯೊಬ್ಬರು ಈ ದಾರಿಯಲ್ಲಿ ಓಡಾಡುತ್ತಿದ್ದಾರೆ, ಸುಮಾರು 70 ವರ್ಷಗಳಿಂದ ಈ ಭಾಗದ ಜನರಿಗೆ ರಸ್ತೆಯ ಸಂಪರ್ಕವೇ ಇಲ್ಲವಾಗಿದೆ. ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಈ ಗ್ರಾಮದಲ್ಲಿ ಶಾಲೆಗೆ ತೆರಳುವ ಮಕ್ಕಳಿದ್ದಾರೆ, ವಯಸ್ಸಾದ ವೃದ್ಧ ರಿದ್ದಾರೆ, ಮಕ್ಕಳನ್ನು ಶಾಲೆಗೆ ಬಿಡಲು ಸಹ ಪೋಷಕರು ಮಕ್ಕಳೊಂದಿಗೆ ಸಾಗಬೇಕಾದ ಅನಿವಾರ್ಯತೆ ಇದೆ, ಮನೆಗೆ ಬೇಕಾದ ವಸ್ತುಗಳನ್ನು ಸಹ ಬೇರೆಡೆಯಿಂದ ಲೇತರ ಬೇಕಾಗಿದ್ದು ಸಮರ್ಪಕವಾದ ರಸ್ತೆ ಸೌಲಭ್ಯವಿಲ್ಲದೆ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. 

ಸಮರ್ಪಕವಾದ ನೆಟ್ವರ್ಕ್ ಸೌಲಭ್ಯವೂ ಇಲ್ಲದೆ ಇರುವುದು ವಿಷಾದನೀಯ, ತುರ್ತು ಸಂದರ್ಭಗಳಲ್ಲಿ ಅವಶ್ಯಕವಾಗಿ ಕರೆಮಾಡಲು ಸಹ ನೆಟ್ವರ್ಕ್ ಲಭ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೂಲಭೂತವಾದ ರಸ್ತೆ ಆಸ್ಪತ್ರೆ ನೆಟ್ವರ್ಕ್ ಮುಂತಾದ ಸೌಲಭ್ಯಗಳು ದೊರೆಯದೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಸಮಸ್ಯೆಗೀಡಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಾಮಾನ್ಯ ಜನರ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಿ ಜನರ ಬಾಳಿಗೆ ಆಶಾಕಿರಣವಾಗಬೇಕಿದೆ.