ಕಾರ್ಕಳ/ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಈ ಹಿಂದಿನ ದಿನಗಳಲ್ಲಿ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿ ಕಂಡು ಬರುತ್ತಿದ್ದ ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ಕ್ರಮೇಣ ನಕ್ಸಲರ ಚಲನವಲನಗಳು ಕಡಿಮೆಯಾಗುತ್ತಾ ಬಂದಿದೆ, ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಇಬ್ಬರು ನಕ್ಸಲರ ಮೇಲೆ ಬಂಧನ ವಾರೆಂಟ್ ಜಾರಿಗೊಳಿಸಿದ್ದು, ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಣೆ ಮಾಡಿದೆ.

ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ಕುಡುಡಿ ಮುಖ್ಯ ರಸ್ತೆಯ ದೂತರ ಮಠದ ಅಂಬೇಡ್ಕರ್ ಕಾಲನಿಯ ನಿವಾಸಿಯಾಗಿದ್ದ ಮಹೇಶ್ ಅಲಿಯಾಸ್ ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಾರಪ್ಪ ಎಂಬುವವನು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ  ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು ಎಂಬ ಇಬ್ಬರು ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು ತಲೆಮರೆಸಿ ಕೊಂಡಿದ್ದಾರೆ. ಇವರು ಪಶ್ಚಿಮಘಟ್ಟಗಳಲ್ಲಿ ನಡೆದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ. 

ಪ್ರಸ್ತುತ ಮಾಹಿತಿ ನೀಡಿರುವ ಇಬ್ಬರನ್ನು ಹುಡುಕಿಕೊಟ್ಟವರಿಗೆ ಅಥವಾ ಅವರ ಸುಳಿವು ನೀಡಿದವರಿಗೆ ತಲಾ ಹತ್ತುಲಕ್ಷ ರೂಪಾಯಿಗಳನ್ನು ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಘೋಷಣೆ ಮಾಡಿದೆ. 

ಆರೋಪಿಗಳ ಸುಳಿವು ನೀಡುವವರು ಈ ವಿಳಾಸವನ್ನು ಸಂಪರ್ಕಿಬಹುದಾಗಿದೆ, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಹೌಸ್ ನಂಬರ್ 28/443 ಗಿರಿನಗರ ಕಡವಂತರ ಕೊಚ್ಚಿ ಕೇರಳ - 682020. ಮೊಬೈಲ್ ಸಂಖ್ಯೆ : 9477715294. ಮಾಹಿತಿ ನೀಡಿದವರ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿ ಇಡುವುದಾಗಿ ಸಂಸ್ಥೆಯು ತಿಳಿಸಿದೆ.

ಕಾರ್ಕಳವನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ನಕ್ಸಲ್ ನಿಗ್ರಹದಳ ಪಡೆಯ ನೂತನ ಎಸ್. ಪಿ ಆಗಿ ರಾಯಚೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಸ್ಪಿ ನಿಕಂ ಪ್ರಕಾಶ್ ಅಮೃತ್ ಅವರನ್ನು ಕಾರ್ಕಳಕ್ಕೆ ವರ್ಗ ಮಾಡಿ  ಸರ್ಕಾರ ಆದೇಶ ಹೊರಡಿಸಿದೆ.