ಚಿಕ್ಕಮಗಳೂರು : ಮಲೆನಾಡಿನ ಕೆಲವು ಭಾಗಗಳಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು ಕೆಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಹಲ್ಗೋಡು ಸೇತುವೆಯು ಭಾರಿ ಮಳೆಗೆ ಕುಸಿತಗೊಂಡಿದೆ. ಈ ವರ್ಷದಲ್ಲಿ ಮೂರನೇ ಬಾರಿ ಈ ಸೇತುವೆಯು ಕುಸಿದಿದ್ದು ಪ್ರಸ್ತುತ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಾಗುಂಡಿಯಿಂದ ಹೊರನಾಡು, ಬಾಳೆಹೊನ್ನೂರು, ಕಳಸ, ಕುದುರೆಮುಖ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಕುಸಿತಗೊಂಡಿದ್ದು ಕೇವಲ ಲಘು ವಾಹನಗಳು ಮಾತ್ರ ಈ ಕಿರು ಸೇತುವೆಯ ಮೇಲೆ ಸಂಚಾರ ಮಾಡಲು ಯೋಗ್ಯವಾಗಿದೆ. ಬಸ್ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. 

ಸೇತುವೆಯು ಮೂರನೇ ಬಾರಿಗೆ ಕುಸಿಯುತ್ತಿದ್ದು, ಕಳಪೆ ಕಾಮಗಾರಿಯಿಂದಾಗಿ ಈ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕಿದ್ದಾರೆ ಹಾಗೂ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಲಘು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.