ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು - ಬೆಂಗಳೂರು ರೈಲು ಪುನರಾರಂಭಕ್ಕೆ ಸರ್ಕಾರ ಸೂಚನೆ ನೀಡಿದೆ ಈ ಮೂಲಕ ಜನರಿಗೆ ಹೊಸವರ್ಷವು  ಮರು ರೈಲು ಆರಂಭದ ಜೊತೆಗೆ ಪ್ರಾರಂಭವಾಗಲಿದೆ.

ಕಾಫಿನಾಡು ಚಿಕ್ಕಮಗಳೂರನ್ನು ಹಾಗೂ ಬೆಂಗಳೂರನ್ನು ಸಂಪರ್ಕಿಸುವ ಏಕೈಕ ರೈಲು ಮತ್ತು ಚಿಕ್ಕಮಗಳೂರು - ಶಿವಮೊಗ್ಗ ರೈಲುಗಳ ಓಡಾಟದ ಮರು ಆರಂಭ ಹಾಗು ಇದಕ್ಕೆ ಪೂರಕವಾಗಿ ಚಿಕ್ಕಮಗಳೂರು ಕಡೂರು ಮಾರ್ಗದ ತಾತ್ಕಾಲಿಕ ಸ್ಥಗಿತಗೊಳ್ಳುವಿಕೆಯನ್ನೂ ತಕ್ಷಣವೇ ರದ್ದು ಮಾಡುವಂತೆ ಉಡುಪಿ - ಚಿಕ್ಕಮಗಳೂರು ಸಂಸದರಾದ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರೂ ಆದ ಕುಮಾರಿ ಶೋಭಾ ಕರಂದ್ಲಾಜೆಯವರ ಪ್ರಯತ್ನ ಯಶಸ್ವಿಯಾಗಿದೆ. ಕ್ರಮವಾಗಿ ಜನವರಿ 3 ಮತ್ತು 4 ರಿಂದ ರೈಲುಗಳ ಮರು ಓಡಾಟ ಆರಂಭವಾಗಲಿದೆ ಎಂದು ಸಚಿವೆ ಮಾಹಿತಿ ‌ನೀಡಿದ್ದಾರೆ.

ಪ್ರವಾಸಿತಾಣಗಳನ್ನು ಒಳಗೊಂಡ ಹಾಗೂ ರಾಜ್ಯದ ಮಲೆನಾಡಿನ ಪ್ರಮುಖ ಜಿಲ್ಲೆಯೂ ಆದ ಚಿಕ್ಕಮಗಳೂರು ಕಾಫಿ ಮತ್ತು ಇತರ ಹಲವು ಕೃಷಿಗೆ ಖ್ಯಾತವಾಗಿದ್ದು, ನಿತ್ಯ ಸಾವಿರಾರು ಜನರಿಗೆ ಪ್ರಯಾಣಕ್ಕೂ, ಕೃಷಿ ಸಂಬಂದಿತ ಗೂಡ್ಸ್ ರೈಲುಗಳ ಓಡಾಟಕ್ಕೂ ಅನುಕೂಲಕರವಾಗುವಂತಹ ಮಾರ್ಗವಾಗಿದೆ ಎಂದು ರೈಲ್ವೇ ಸಚಿವರಿಗೆ ಹಾಗು ರೈಲ್ವೇ ಅದಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಈ ಹಿಂದೆ ಇಲಾಖೆ ತೆಗೆದುಕೊಂಡ ನಿರ್ಣಯವನ್ನು ವಾಪಾಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಕಡೂರು ರೈಲು ಮಾರ್ಗವನ್ನು ಹಾಗು ರೈಲುಗಳನ್ನು ಲಾಭದಾಯಕವಾಗಿ ಜನಸ್ನೇಹಿಯಾಗಿ ಮಾಡಲು ಶೋಭಾ ಕರಂದ್ಲಾಜೆಯವರು ಹಲವಾರು ಸಲಹೆಗಳನ್ನು ರೈಲ್ವೇ ಸಚಿವರ ಜತೆ ಹಂಚಿಕೊಂಡಿದ್ದು , ಅದರಲ್ಲಿ, ಚಿಕ್ಕಮಗಳೂರು-ಬೆಂಗಳೂರು ನಡುವೆ ಹೊಸ ರಾತ್ರಿ‌ ಸ್ಲೀಪರ್ ರೈಲು‌, ಹಗಲು ಹೊತ್ತಲ್ಲಿ ಬೆಂಗಳೂರು ಕಡೆ ಪ್ರಯಾಣಿಸುವವರಿಗೆ ಕಡೂರು, ಬೀರೂರಲ್ಲಿ ಸಂಪರ್ಕ ನೀಡುವ ಚಿಕ್ಕಮಗಳೂರು ಬಿರೂರು/ಕಡೂರು ಡೆಮು ಸೇವೆ, ಹಾಗು ಕೃಷಿ ಸಂಬಂಧಿತ ಕಿಸಾನ್ ರೈಲುಗಳ ಓಡಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಇದಕ್ಕೆ ಪೂರಕವಾಗಿ ಸ್ಪಂದಿಸಿದ ರೈಲ್ವೇ ಸಚಿವರು, ಸಮಯ ಬದಲಾವಣೆ, ಹೊಸ ರೈಲುಗಳ ಓಡಾಟದ ಬಗ್ಗೆ ಪರೀಶಿಲಿಸಿ ಪ್ರಸ್ತಾಪ ಸಲ್ಲಿಸುವಂತೆ ಅದಿಕಾರಿಗಳಿಗೆ ಸೂಚಿಸಿದರು. ರೈಲುಗಳ ರದ್ದತಿಯ ವಾಪಾಸಾತಿ ಕುರಿತು ಕ್ರಮ ಕೈಗೊಂಡ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇಷ್ಟು ದಿನಗಳ ಕಾಲ ದುಬಾರಿ ಬೆಲೆತೆತ್ತು ಕಾಫಿನಾಡಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣ ನಡೆಸುತ್ತಿದ್ದ ಸಾರ್ವಜನಿಕರು ಇದೀಗ ಕಡಿಮೆ ಬೆಲೆಯಲ್ಲಿ ವೇಗವಾಗಿ ಬೆಂಗಳೂರನ್ನು ಸೇರಬಹುದಾಗಿದೆ.