ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನರಸಿಂಹರಾಜಪುರ ಹಾಗೂ ತಾಲೂಕು ಸೇವಾ ಸಮಿತಿ ಶೃಂಗೇರಿ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್ ರಾಯಣ್ಣವರ್ ನೆರವೇರಿಸಿದರು.
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಯುವಕರೇ ಮುಂದಿನ ನಾಗರೀಕರು ವಿದ್ಯಾರ್ಥಿ ದೆಸೆಯಲ್ಲಿಯೇ ಯುವಕರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಶ್ರೇಣಿಯನ್ನು ಅಲಂಕರಿಸಬೇಕು ಆ ಮೂಲಕ ತಂದೆ ತಾಯಿಯರಿಗೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ನಂತರ ವಿದ್ಯಾರ್ಥಿಗಳಿಗೆ ಸೈಬರ್ ಲಾ ಕುರಿತಾದ ಉಪನ್ಯಾಸ ನೀಡಿದ ವಕೀಲರಾದ ಹೆಚ್. ಆರ್ ಉಮೇಶ್ ಹೆಗ್ಡೆ ಅವರು ಕೊರೋನ ನಂತರದ ದಿನಗಳಲ್ಲಿ ಒಂದನೇ ತರಗತಿಯ ಮಕ್ಕಳಿನಿಂದ ಉನ್ನತ ಪದವಿ ಓದುವ ದೊಡ್ಡವರವರೆಗೂ ಮೊಬೈಲ್ ಅನಿವಾರ್ಯವಾಗಿದೆ, ಆದರೆ ಅದರ ಜ್ಞಾನ ಸಣ್ಣ ವಯಸ್ಕರಲ್ಲಿ ಅತ್ಯಂತ ಕಡಿಮೆ ಇರುತ್ತದೆ ಆದ ಕಾರಣ ಸೈಬರ್ ಸಮಸ್ಯೆಗಳು ತಲೆದೋರಿದೆ ಎಂದರು.
ಅಂಕಿ ಅಂಶಗಳ ಪ್ರಕಾರ ಪ್ರತೀ 10 ನಿಮಿಷಕ್ಕೆ ಒಂದು ಸೈಬರ್ ಕ್ರೈಮ್ ನಡೆಯುತ್ತಲಿದೆ, ಆನ್ಲೈನ್ ಬ್ಯಾಂಕಿಂಗ್ ನ ಮೂಲಕ ವಂಚನೆ, ಮಾನಹಾನಿ, ದೇಶದ್ರೋಹ ಮುಂತಾದ ರೀತಿಯಲ್ಲಿ ಅಪರಾಧಗಳನ್ನು ಆನ್ಲೈನ್ ಮೂಲಕ ನಡೆಸಲಾಗುತ್ತಿದೆ. ಅಲ್ಲದೇ ಕೇವಲ ಒಂದು ಒಟಿಪಿ ಪಡೆಯುವ ಮೂಲಕ ತಮ್ಮ ಖಾತೆಯಲ್ಲಿ ಖದೀಮರು ಹಣ ದೋಚುತ್ತಾರೆ ಈ ಕುರಿತು ಎಚ್ಚರದಿಂದಿರಬೇಕು ಎಂದು ಕಿವಿ ಮಾತು ಹೇಳಿದರು.
ಒಬ್ಬರ ಮಾಹಿತಿಯನ್ನು ಬೇರೊಬ್ಬರು ಕದಿಯಲಾರದಂತೆ ಅತ್ಯಂತ ಕಠಿಣ ಹಾಗೂ ಬಹುಭಾಷಾ ಅಕ್ಷರಗಳಿಂದ ಪಾಸ್ವರ್ಡ್ ಗಳನ್ನು ರಚಿಸಿ ಆ ಮೂಲಕ ವ್ಯವಹರಿಸುವ ಯಾವುದೇ ಖಾತೆಗಳು ಬೇರೊಬ್ಬರಿಗೆ ಸಿಗದಂತೆ ನೋಡಿಕೊಳ್ಳಬಹುದು ಎಂಬ ಸಲಹೆ ನೀಡಿದರು. ಪ್ರಸ್ತುತ ಯಾವುದೇ ಅಪರಾಧಗಳು ನಡೆದರೂ ಕೂಡ ಕೇವಲ ಮೊಬೈಲ್ ಫೋನ್ ನಿಂದ ಅಪರಾಧ ಎಸಗಿದವರನ್ನು ಪತ್ತೆ ಮಾಡಲಾಗುತ್ತಿದೆ ಹೀಗೆ ಪತ್ತೆಮಾಡಲಾದ ಹಲವಾರು ನಿದರ್ಶನಗಳು ಸುತ್ತ ಮುತ್ತಲಿನ ಪ್ರದೇಶಗಳಲ್ಲಿದೆ ಎಂದರು.
ಸಾಮಾಜಿಕ ಜಾಲತಾಣಗಳನ್ನು ಕೇವಲ ಅಗತ್ಯಕ್ಕಾಗಿ ಮಾತ್ರ ಉಪಯೋಗಿಸಿಕೊಂಡರೆ ಉತ್ತಮ. ದುರುಪಯೋಗ ಮಾಡಿಕೊಂಡರೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮಗಳ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.
ನಂತರ ಮಾತನಾಡಿದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ಜಡ್ಜ್ ಶ್ರೀ ಸಚಿನ್ ಡಿ, ಸ್ವಾಮಿ ವಿವೇಕಾನಂದ ಅವರಲ್ಲಿರುವ ಉತ್ತಮ ಗುಣಗಳನ್ನು ನಾವು ಹೊಂದಬೇಕು ಆಗ ಮಾತ್ರ ಬದುಕು ಪರಿಪೂರ್ಣವಾಗುತ್ತದೆ. ಸ್ವಾಮಿ ವಿವೇಕಾನಂದರಲ್ಲಿ ಪ್ರಶ್ನೆ ಮಾಡುವ ಗುಣಗಳು ಹೆಚ್ಚಿತ್ತು ಯಾವುದೇ ವಿಚಾರವನ್ನಾಗಲಿ ಅವರು ಪರೀಕ್ಷೆ ಮಾಡದೆ ಸ್ವೀಕಾರ ಮಾಡುತ್ತಿರಲಿಲ್ಲ ಈ ರೀತಿಯಾದ ಉತ್ತಮ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಹೊಂದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೃಂಗೇರಿ ವಕೀಲರ ಸಂಘದ ಅಧ್ಯಕ್ಷ ಜಿ.ಎಂ ಸತೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮವಾದ ನಡವಳಿಕೆಯನ್ನು ಹೊಂದುವಂತೆ ತಿಳಿಸಿದರು ಹಾಗೂ ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಸಮಾಜಕ್ಕಾಗಿ ಸರ್ವಸ್ವವನ್ನೂ ಮುಡಿಪಾಗಿರಿಸಿರುವ ವ್ಯಕ್ತಿಗಳನ್ನು ಅನುಸರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ಜಡ್ಜ್ ಶ್ರೀಮತಿ ಭಾರತಿ ಎಸ್ ರಾಯಣ್ಣವರ್, ಶೃಂಗೇರಿ ವಕೀಲರ ಸಂಘದ ಅಧ್ಯಕ್ಷ ಶ್ರೀ ಸತೀಶ್ ಜಿ.ಎಂ, ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಶ್ರೀ ಸಚಿನ್ ಡಿ, ವಕೀಲರಾದ ಹೆಚ್.ಆರ್ ಉಮೇಶ್ ಹೆಗ್ಡೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಶೃಂಗೇರಿಯ ಪ್ರಾಂಶುಪಾಲರಾದ ಅರುಣ್ ಕುಮಾರ್ ನೆಹರು ಯುವ ಕೇಂದ್ರದ ಪದಾಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

0 Comments