ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಆಕಸ್ಮಿಕವಾಗಿ ಬೆಂಕಿ ಅವಘಡ ಉಂಟಾದ ಪರಿಣಾಮ ಸರಿ ಸುಮಾರು ಮೂರು ಎಕರೆ ಕಾಫಿತೋಟ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ಬೆಳಕಿಗೆ ಬಂದಿದೆ. 

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ರತೀಶ್ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು ಇಂದು ಮಧ್ಯಾಹ್ನ 3.30 ರ ಸುಮಾರಿಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ ತೋಟದಲ್ಲಿದ್ದ ಅಡಕೆ ಹಾಗೂ ಕಾಫಿ ಗಿಡಗಳು ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ.



ಬೆಂಕಿಯ ಕೆನ್ನಾಲಿಗೆಗೆ ಬಹಳ ಸಮಯದಿಂದ ಫೋಷಣೆ ಮಾಡಿದ್ದ ಗಿಡಗಳು ಸಂಪೂರ್ಣವಾಗಿ ನಾಶವಾಗಿದೆ ಮೊದಲೇ ರೋಗದಿಂದ ಬಳಲುತ್ತಿದ್ದ ಗಿಡಗಳಿಂದ ಅಲ್ಪ ಪ್ರಮಾಣದ ಲಾಭ ಲಭಿಸುತಿತ್ತು ಆದರೆ ಈ ಅವಘಡದಿಂದ ಜೀವನ ನಡೆಸುವುದು ದುಸ್ತರವಾಗಿದೆ ಎಂದು ರೈತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಎರಡು ಸಾವಿರ ಅಡಿಕೆ ಹಾಗೂ ಎರಡು ಸಾವಿರದಷ್ಟು ಕಾಫಿಗಿಡಗಳು ಅಗ್ನಿಯ ಕೆನ್ನಾಲಿಗೆಗೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಆದಷ್ಟು ಶೀಘ್ರವಾಗಿ ಅಧಿಕಾರಿಗಳು ನಷ್ಟಕ್ಕೆ ಪರಿಹಾರ ದೊರಕಿಸಬೇಕೆಂದು ರತೀಶ್ ಕೋರಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.