ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ತಾಲೂಕು ಕಛೇರಿಯಲ್ಲಿನ ಕಡತಗಳ ನಾಪತ್ತೆ ಪ್ರಕರಣದ ಆರೋಪಿ ಎಫ್.ಡಿ.ಎ ಪ್ರಕಾಶ್ ನ ಮೇಲೆ ಕೊನೆಗೂ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಾಲೂಕು ಕಛೇರಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಎಫ್.ಡಿ.ಎ ದರ್ಜೆ ಪ್ರಕಾಶ್ ಕಡತ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾಗೂ ಕಳುವಾಗಿರುವ ಕಡತಗಳನ್ನು ತನ್ನ ಬಳಿಯಲ್ಲೇ ಇರಿಸಿಕೊಂಡು ಹಣ ಪಡೆದು ಮಂಜೂರಾತಿ ನಡೆಸುತ್ತಿದ್ದ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ನಂತರದಲ್ಲಿ ಈತನನ್ನು ಶೃಂಗೇರಿಯ ತಾಲೂಕು ಕಛೇರಿಗೆ ವರ್ಗಾವಣೆ ಮಾಡಲಾಗಿತ್ತು, ಈತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಈ ಹಿಂದಿನ ಕೆಡಿಪಿ ಸಭೆಯಲ್ಲಿ ತಿಳಿಸಿದ್ದರೂ ಕೂಡ ಈತನ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿರಲಿಲ್ಲ. 

ನಿನ್ನೆ ಕೊಪ್ಪದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊಪ್ಪದ ತಾಲೂಕು ಕಛೇರಿಯ ಮುಂಭಾಗದಲ್ಲಿ ಶಾಸಕ ಟಿ.ಡಿ ರಾಜೇಗೌಡ ಅವರನ್ನೊಳಗೊಂಡಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮೂರೊಳ್ಳಿ ಹಾಗೂ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪ್ರಕಾಶ್ ಗೆ ಶಿಕ್ಷೆಯಾಗಬೇಕೆಂದು ಪ್ರತಿಭಟಿಸಿದ್ದರು. 

ಇದನ್ನೂ ಓದಿ : ಕೊಪ್ಪ : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹೆರಿಗೆಯಾದ ಮಹಿಳೆ ; ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳ ನೆರವಿಗಾಗಿ ಮನವಿ ಸಲ್ಲಿಸಿದ ಕುಟುಂಬ

ಅಂತೆಯೇ ಪ್ರಕಾಶ್ ಮೇಲೆ ಬುಧವಾರ ರಾತ್ರಿಯ ವೇಳೆ ಪ್ರಕರಣ ದಾಖಲಾಗಿದೆ. ಕೊನೆಗೂ ನಿನ್ನೆ ಕಾಂಗ್ರೆಸ್ಸಿಗರು ನಡೆಸಿದ ಪ್ರತಿಭಟನೆಗೆ ಮಣಿದು ಓರ್ವ ಭ್ರಷ್ಟನ ಮೇಲೆ ಕೇಸ್ ದಾಖಲಾಗಿದೆ.