ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಗೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ ಜನರು ತಮ್ಮ ಅಗತ್ಯತೆಗೆ ಅನುಗುಣವಾಗಿಲ್ಲದ ಆಸ್ಪತ್ರೆಯ ಕುರಿತು ಬ್ಯಾನರ್ ಅಳವಡಿಸಿ ತಮ್ಮ ಸಮಸ್ಯೆಯನ್ನು ವ್ಯಕ್ತ ಪಡಿಸಿದ್ದಾರೆ. 

ಇದನ್ನೂ ಓದಿ : ಶೃಂಗೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ನಿಶ್ಮಿತ ಬಸ್ ಪಲ್ಟಿ ! 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಜನರು ಕಳೆದ ಅನೇಕ ವರ್ಷಗಳಿಂದ ಊರಿಗೊಂದು ನೂರು ಬೆಡ್ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಮನವಿ ಸಲ್ಲಿಕೆ, ಹೋರಾಟ, ಪ್ರತಿಭಟನೆ, ಶೃಂಗೇರಿ ಬಂದ್ ಕೂಡ ನಡೆಸಿದ್ದರು ಆದರೆ ಅವರಿಗೆ ನೀಡಿರುವ ಆಶ್ವಾಸನೆಗಳು ಕೇವಲ ಆಶ್ವಾಸನೆಯಾಗಿಯೇ ಉಳಿದಿರುವ ಕಾರಣ ಬ್ಯಾನರ್ ಅಳವಡಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. 




ಶೃಂಗೇರಿಗೆ ಆಗಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಿಗೆ ಆತ್ಮೀಯ ಸ್ವಾಗತ. ಶೃಂಗೇರಿ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ ಕಡತವು ಕಳೆದ 15 ವರ್ಷಗಳಿಂದ ಪ್ರಗತಿಯಲ್ಲಿದೆ ಏನಾದರೂ ಅವಘಡ ಸಂಭವಿಸಿದರೆ ಸುಸಜ್ಜಿತ ಆಸ್ಪತ್ರೆಯಿಲ್ಲ ನಿಮ್ಮ ಹಾಗೂ ನಮ್ಮೂರಿನ ಜನರ ಸುರಕ್ಷತೆಯ ದೃಷ್ಟಿಯಿಂದ ದಯವಿಟ್ಟು ನಿಧಾನವಾಗಿ ಚಲಿಸಿ, ತೀವ್ರ ಅನಾರೋಗ್ಯ 100 ಕಿಲೋಮೀಟರ್ ದೂರದ ಆಸ್ಪತ್ರೆಗೆ ತೆರಳಬೇಕಾಗಿರುವ ಕಾರಣ ದಯಮಾಡಿ ನಿಧಾನವಾಗಿ ಚಲಿಸಿ ಎಂಬ ಬ್ಯಾನರ್ ಅಳವಡಿಕೆ ಮಾಡಲಾಗಿದೆ.




ಬ್ಯಾನರ್ ಅಳವಡಿಸಿರುವ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಈ ಹಿಂದಿನಿಂದಲೂ ಆಸ್ಪತ್ರೆಗಾಗಿ ಅನೇಕ ಬಾರಿ ಮನವಿಸಲ್ಲಿಕೆ, ಹೋರಾಟ, ಅಧಿಕಾರಿಗಳೊಂದಿಗೆ ಚರ್ಚೆ ಮುಂತಾದವನ್ನು ನಡೆಸಿದ್ದರು ಆದರೆ ಇನ್ನೂ ಆಸ್ಪತ್ರೆಗೆ ಮಂಜೂರಾತಿ ದೊರೆಯದೇ ಇರುವುದು ಮುಖ್ಯವಾಗಿ ಮಲೆನಾಡಿನಲ್ಲಿ ವಾಸಮಾಡುವ ಜನರ ಹಾಗೂ ಇಲ್ಲಿಗೆ ಆಗಮಿಸುವ ಪ್ರವಾಸಿಗರ ದೌರ್ಭಾಗ್ಯವೇ ಸರಿ. 

ಈ ಕುರಿತು ಅತೀ ಶೀಘ್ರವಾಗಿ ಕ್ರಮ ಕೈಗೊಂಡು ಆಸ್ಪತ್ರೆ ನಿರ್ಮಾಣಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಬೇಕೆಂದು ಸಾರ್ವಜನಿಕರು ಹಾಗೂ ಆಸ್ಪತ್ರೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.