ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಎರಡು ದಿನಗಳಿಂದ ಪ್ರವಾಸಿಗರ ದಂಡೇ ಶೃಂಗೇರಿಗೆ ಹರಿದು ಬರುತ್ತಿದ್ದು ಅಲ್ಲಲ್ಲಿ ಕೆಲ ಸಮಸ್ಯೆಗಳು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಎದುರಾಗಿದೆ.
ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಪ್ರವಾಸಿಗರಿಗೆ ವಾಹನ ನಿಲ್ಲಿಸಲು ಹಾಗೂ ತಂಗಲು ಲಾಡ್ಜ್ ಗಳ ಸಮಸ್ಯೆ ಎದುರಾಗಿದೆ.
ಹರಿಹರಪುರ ಶ್ರೀ ಮಠದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಸಹ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಿದ್ದು ಹರಿಹರಪುರ ಮಠ ಹಾಗೂ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠವನ್ನು ನೋಡಲು ಶಾರದೆಯ ದರ್ಶನವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.
ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಗುಡ್ ಫ್ರೈಡೇ ನಿಮಿತ್ತ ಸಾಲು ಸಾಲು ರಜೆಗಳು ಒಂದೆಡೆ ದೊರೆತಿದ್ದು ಇನ್ನೊಂದೆಡೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾದ ಹಿನ್ನೆಲೆ ಅನೇಕ ಸಂಖ್ಯೆಯಲ್ಲಿ ಪ್ರವಾಸಿಗರು ತಮ್ಮ ವಾಹನಗಳ ಮೂಲಕ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಆಗಮಿಸುತ್ತಿದ್ದಾರೆ.
ವಾಹನ ಪಾರ್ಕಿಂಗ್ ಫುಲ್ ರಶ್ :
ಶೃಂಗೇರಿಯ ಗಾಂಧೀ ಮೈದಾನದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಪ್ರವಾಸಿಗರು ತಮ್ಮ ವಾಹನಗಳನ್ನು ದೇವಾಲಯದ ಮುಂಭಾಗದ ರಸ್ತೆಯಾದ ಭಾರತೀ ಬೀದಿಯಲ್ಲಿ ನಿಲುಗಡೆ ಮಾಡುತ್ತಿದ್ದರೆ ಈ ಕಾರಣದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ನಡೆದುಕೊಂಡು ಸಾಗುವ ಪಾದಚಾರಿಗಳಿಗೂ ಕೂಡ ಸಮಸ್ಯೆ ಉಂಟಾಗಿದೆ.
ಪಟ್ಟಣದಲ್ಲಿರುವ ಆಂಜನೇಯನ ದೇವಾಲಯಗಳಲ್ಲಿ ರಾಮನವಮಿ, ಹನುಮ ಜಯಂತಿಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಪ್ರತಿದಿನ ರಾತ್ರಿ ವೇಳೆಯಲ್ಲಿ ಸಾಗುವ ಉತ್ಸವದ ಸಂದರ್ಭದಲ್ಲೂ ಕೂಡ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಮಧ್ಯರಾತ್ರಿಯ ವರೆಗೂ ಕೂಡ ಪ್ರವಾಸಿಗರು ಶೃಂಗೇರಿಗೆ ಆಗಮಿಸುತ್ತಿದ್ದು ಎಲ್ಲೆಡೆ ತಂಗಲು ರೂಂಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಾ ದಾರಿಯಲ್ಲಿ ಓಡಾಡುವ ಸ್ಥಳೀಯ ವ್ಯಕ್ತಿಗಳಲ್ಲಿ ರೂಂ ಕುರಿತಾಗಿ ವಿಚಾರ ಮಾಡುವುದು ಹೆಚ್ಚಾಗಿ ಕಂಡುಬಂತು.
ಪ್ರವಾಸಿಗರು ಒನ್ ವೆ ಮುಖಾಂತರವೇ ದೇವಾಲಯವನ್ನು ಪ್ರವೇಶ ಮಾಡುತ್ತಿರುವ ಕಾರಣ ಪಟ್ಟಣದ ಭಾರತೀ ಬೀದಿ ಹಾಗೂ ಹಿಂಭಾಗದ ಬೈಪಾಸ್ ರಸ್ತೆಯಲ್ಲೂ ಕೂಡ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆ ಅಗಲೀಕರಣ ಹಾಗೂ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯ ಮೂಲಕವಷ್ಟೇ ಈ ಸಮಸ್ಯೆಗಳು ಬಗೆಹರಿಯಲಿದೆ.

.jpeg)








0 Comments