ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತಿ ಪತ್ನಿಗೆ ಕಿರುಕುಳ ನೀಡಿ ವಿಷ ಪ್ರಾಶನ ಮಾಡಿಸಿರುವ ಮನ ಕಲುಕುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರ್ಬೈಲ್ ನಂದಿತ್ ಎಂಬುವವನೊಂದಿಗೆ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಲೋಕಪ್ಪಗೌಡ ಅವರ ಪುತ್ರಿ ಗಾನವಿಯೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಮದುವೆಯಾದ ನಂತರದಲ್ಲಿ ವರದಕ್ಷಿಣೆ ತರುವಂತೆ ನಂದಿತ್ ನೀಡುತ್ತಿದ್ದ ಕಿರುಕುಳ ಹಾಗೂ ಆತನ ವರ್ತನೆಗೆ ಬೇಸತ್ತಿದ್ದ ಗಾನವಿ ಈ ಕುರಿತು ಪೋಷಕರಿಗೆ ತಿಳಿಸಿದ್ದಳು. 

ನಿರಂತರವಾಗಿ ಗಾನವಿಗೆ ನೀಡುತ್ತಿರುವ ಕಿರುಕುಳವನ್ನು ನೋಡಲಾರದೆ ಪೋಷಕರು ಎರಡು ಲಕ್ಷ ರೂಗಳನ್ನು ನಂದಿತ್ ಗೆ ನೀಡಿದ್ದರು. ಕೇಳಿದಂತೆ ಹಣ ನೀಡಿದರೂ ಕೂಡ ಕಿರುಕುಳವನ್ನು ನೀಡುತ್ತಲೆ ಇದ್ದ ಕಾರಣ ಅಲ್ಲಿರಲಾರದೆ ಗಾನವಿ ವಾಪಸ್ ತವರು ಮನೆಗೆ ಮರಳಿದ್ದಳು.

ಮೂರು ತಿಂಗಳುಗಳ ಕಾಲ ತವರು ಮನೆಯಲ್ಲಿದ್ದ ಗಾನವಿಯನ್ನು ಇನ್ನು ಮುಂದಿನ ದಿನಗಳಲ್ಲಿ ಅತ್ಯುತ್ತಮವಾಗಿ ಜೀವನ ನಡೆಸೋಣ ಎಂದು ಪುಸಲಾಯಿಸಿ ಪುನಃ ಮನೆಗೆ ಕರೆದುಕೊಂಡು ಹೋದ ನಂದಿತ್ ಎಂದಿನಂತೆ ತನ್ನ ಹಳೆ ಚಾಳಿಯನ್ನು ಆರಂಭಿಸಿದ್ದ. ಮನೆಗೆ ಕರೆದುಕೊಂಡು ಹೋದ ನಂತರದಲ್ಲಿ ಹಿಂಸೆ ನೀಡುತ್ತಿದ್ದ ದೃಶ್ಯಗಳನ್ನು ಗಾನವಿ ಮೊಬೈಲ್ನಲ್ಲಿ ಸೆರೆಹಿಡಿದಿದ್ದಳು.

ಈ ವಿಚಾರ ತಿಳಿಯುತ್ತಿದ್ದಂತೆಯೆ ಗಾನವಿಯ ಮೊಬೈಲನ್ನು ಕಿತ್ತುಕೊಂಡ ನಂದಿತ್, ಆಕೆಗೆ ಊಟದಲ್ಲಿ ವಿಷ ಬೆರೆಸಿ ಕೊಲ್ಲುವ ಯತ್ನ ನಡೆಸಿದ್ದರು ಎಂಬ ಗಂಭೀರ ಆರೋಪವನ್ನು ಗಾನವಿಯ ಪೋಷಕರು ಮಾಡಿದ್ದಾರೆ. ಊಟದಲ್ಲಿ ವಿಷ ಬೆರೆಸಿ ಒತ್ತಾಯಪೂರ್ವಕವಾಗಿ ತಿನ್ನಿಸಿ ಗಾನವಿ ಅಸ್ವಸ್ಥಳಾದ ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಿ ಮೂರು ದಿನಗಳ ನಂತರ ಗಾನವಿಯ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಾರೆ. 

ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಗಾನವಿ ಯುಗಾದಿ ಹಬ್ಬದ ದಿನವಾದ ನಿನ್ನೆ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಘಟನೆಯ ಕುರಿತು ಮೂಡಿಗೆರೆಯ ಜನರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರು ದುಃಖದಲ್ಲಿದ್ದು ವಿಷಪ್ರಾಶನದ ಕುರಿತು ಮಾಹಿತಿ ಲಭಿಸುತ್ತಿದ್ದಂತೆಯೇ ಮೂಡಿಗೆರೆಯ ಪೊಲೀಸರು ನಂದಿತ್ ಹಾಗೂ ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.