ಕೊಟ್ಟಿಗೆಹಾರ : ಗಡೀ ಪ್ರದೇಶವಾದ ಕೊಟ್ಟಿಗೆಹಾರದಲ್ಲಿ ಯೂನಿವರ್ಸಲ್ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಕುರಿತಾಗಿ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಹೇಳಿದರು.

ಕೊಟ್ಟಿಗೆಹಾರದ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅಕ್ಷಯ್ ಹಾಕೆ ಅವರು ಅರಣ್ಯ ಇಲಾಖೆ,  ಪೊಲೀಸ್ ಇಲಾಖೆ,  ಕೃಷಿ ಉತ್ಪನ್ನಗಳ ತನಿಖಾ ಠಾಣೆಯೂ ಎಲ್ಲವೂ  ಒಂದೇ ಕಡೆ ಕಾರ್ಯನಿರ್ವಹಿಸುವಂತೆ ಯೂನಿವರ್ಸಲ್ ಚೆಕ್ ಪೋಸ್ಟ್  ನಿರ್ಮಿಸಲು ಚಿಂತನೆ ನಡೆಸಲಾಗುವುದು ಎಂದರು.

ಕೊಟ್ಟಿಗೆಹಾರದಲ್ಲಿ ಪೊಲೀಸ್ ಇಲಾಖೆ ಜಿಲ್ಲಾಡಳಿತ ಹಾಗೂ ಸ್ಥಳೀಯ ವರ್ತಕರ ಸಹಕಾರದಿಂದ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆಸಲಾಗಿದೆ, ಸ್ಥಳೀಯ ವರ್ತಕರ  ಪಾಲುದಾರಿಕೆ ಇದ್ದಲ್ಲಿ ಸಿ ಸಿ ಕ್ಯಾಮರಾದ ಮುತುವರ್ಜಿ ವಹಿಸಲು ಸಾಧ್ಯವಾಗುತ್ತದೆ ಎಂದು ಈ ಸಮಯದಲ್ಲಿ ತಿಳಿಸಿದರು.

ಚಾರ್ಮಾಡಿ ಘಾಟ್ ನಲ್ಲಿ  ಈಗಾಗಲೇ ಪೊಲೀಸ್ ಗಸ್ತು ವಾಹನ ಸಂಚರಿಸುತ್ತಿದ್ದು , ಇದನ್ನು ಮತ್ತಷ್ಟು ಹೆಚ್ಚಿಸುವಂತೆ ವೃತ್ತನಿರೀಕ್ಷಕ ಸೋಮಶೇಖರ್ ಅವರಿಗೆ ಸೂಚಿಸಿದ ಅವರು, ಕಳೆದ ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟ್ ನಲ್ಲಿ ನಡೆದ ದರೋಡೆಯ ಆರೋಪಿಗಳನ್ನು ಕೇವಲ 10 ಗಂಟೆಗೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು ಹಾಗೂ ಈ ಕುರಿತಾಗಿ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಮಾತಾನಾಡಿ ಚಾರ್ಮಾಡಿ ಘಾಟ್ ನ ರಸ್ತೆ ಬದಿ ಕೆಲವು ಶೆಡ್ ಹಾಕಿ ಅಂಗಡಿ, ಕ್ಯಾಂಟೀನ್ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು ಶೀಘ್ರದಲ್ಲೆ  ರಾಷ್ಟ್ರೀಯ ಹೆದ್ದಾರಿ ನಿಗಮದೊಂದಿಗೆ  ಮಾತನಾಡಿ ಅದನ್ನು ತೆರವುಗೊಳಿಸಲಾಗುವುದು ಎಂದರು.     

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ  ಕಾರ್ಯನಿರ್ವಹಣಾಧಿಕಾರಿ ಹರ್ಷಕುಮಾರ್ ಕೆ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಪ್ರಕಾಶ್, ನೌಕರರ ಸಂಘದ ಪ್ರತಿನಿಧಿ ಪದ್ಮರಾಜ್, ಮೂಡಿಗೆರೆ ವೃತ್ತನಿರೀಕ್ಷಕ ಸೋಮಶೇಖರ್, ಬಣಕಲ್ ಠಾಣೆಯ ಪಿಎಸ್ಐ ಸತೀಶ್,  ಅರಣ್ಯ ರಕ್ಷಕ ವಿಜಯಕುಮಾರ್, ಪರಿಸರವಾದಿ ಸಂಜಯ್ ಗೌಡ ಕೊಟ್ಟಿಗೆಹಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರ