ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದ ಮೂರು ತಿಂಗಳುಗಳ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಕುಟುಂಬಕ್ಕೆ ಇಂದು ವಿಮಾ ಮೊತ್ತವನ್ನು ಪೊಲೀಸ್ ವೇತನ ಪ್ಯಾಕೇಜ್ ಅಡಿಯಲ್ಲಿ ವಿತರಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಹೆಡ್ ಕಾನ್ಸ್ಟೇಬಲ್ ವಸಂತ್ ಕುಮಾರ್ ವೈ.ಆರ್ ಅವರು ಕರ್ತವ್ಯದ ನಿಮಿತ್ತ ಕಡೂರಿನಿಂದ ಸಿಂಗಟಗೆರೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಕ್ಯಾಂಟರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಆಂಬುಲೆನ್ಸ್ ನ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ತೆರಳುವ ಸಂದರ್ಭದಲ್ಲಿ ಅವರು ಕೊನೆ ಯುಸಿರೆಳೆದಿದ್ದರು.
ಕರ್ತವ್ಯ ನಿರತರಾಗಿದ್ದ ವೇಳೆಯಲ್ಲಿ ಮೃತಪಟ್ಟ ಹೆಡ್ ಕಾನ್ಸ್ಟೇಬಲ್ ವಸಂತ್ ಕುಮಾರ್ ಅವರ ತಾಯಿಗೆ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪೊಲೀಸ್ ವೇತನ ಪ್ಯಾಕೇಜ್ ಅಡಿಯಲ್ಲಿ ವಿಮಾ ಮೊತ್ತವಾದ 30 ಲಕ್ಷ ರೂಪಾಯಿ ಹಣವನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಧಿಕಾರಿಗಳು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಜೋಬಿ ಜೋಸ್, ಪ್ರಾದೇಶಿಕ ವ್ಯವಸ್ಥಾಪಕರಾದ ಕನ್ನಯ್ಯಲಾಲ್ ಭೋಪಾಲಿ, ಮುಖ್ಯ ವ್ಯವಸ್ಥಾಪಕರಾದ ಬೋಪಣ್ಣ ಎ. ಎನ್. ಚಿಕ್ಕಮಗಳೂರು ಶಾಖೆ, ಮುಖ್ಯ ವ್ಯವಸ್ಥಾಪಕರಾದ ಸೈಯದ್ ನಿಜಾಮುದ್ದೀನ್, ವಿನಯ್ ಪ್ರಭಾಕರ್ ರವರು ಹಾಜರಿದ್ದರು.






0 Comments