ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಪರೀಕ್ಷೆಯಲ್ಲಿ ಪಾಸ್ ಆದ ಕಾರಣಕ್ಕೆ ಯುವಕನಿಗೆ ಪಾರ್ಟಿ ಕೊಡಿಸುವಂತೆ ಪೀಡಿಸುತ್ತಿದ್ದ ಯುವಕನನ್ನು ಸ್ನೇಹಿತರೇ ಪಾರ್ಟಿಗೆ ಕರೆದುಕೊಂಡು ಹೋಗಿ ಪಾರ್ಟಿಯ ಬಳಿಕದಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ KKB ಬಸ್ ; ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯ

ಈ ಘಟನೆಯಲ್ಲಿ ಹತ್ಯೆಗೀಡಾದ ಯುವಕನನ್ನು ಶಿವಮೊಗ್ಗದ ಹೊಸಮನೆ ಮೂರನೇ ಕ್ರಾಸ್ ನ ನಿವಾಸಿ 23 ವರ್ಷ ಪ್ರಾಯದ ಕಿರಣ್ ಅಲಿಯಾಸ್ ಪುಚ್ಚಿ ಎಂದು ಗುರುತಿಸಲಾಗಿದೆ. ಕೊಲೆಯಾದ ಕಿರಣ್ ಹಾಗೂ ಪ್ರಜ್ವಲ್ ಅಕ್ಕಪಕ್ಕದ ಮನೆಯವರಾಗಿದ್ದು, ಪ್ರಜ್ವಲ್ ತನ್ನ ಪರೀಕ್ಷೆಯಲ್ಲಿ ಉತ್ತೀರ್ಣನಾದ ಕಾರಣಕ್ಕೆ ಪಾರ್ಟಿ ಕೊಡಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಪಾರ್ಟಿ ನಡೆಸುವ ಸಲುವಾಗಿ ಇನ್ನೋರ್ವ ಸ್ನೇಹಿತನಾದ ಗಾಡಿಕೊಪ್ಪದ ಕಾರ್ತಿಕ್ ನೊಂದಿಗೆ ಮೂವರೂ ಕೂಡ ಗಂಧರ್ವ ಬಾರ್ ಹಿಂಭಾಗದ ಜನ ಸಂದಣಿ ಕಡಿಮೆಯಿರುವ ಸ್ಥಳದಲ್ಲಿ ಮದ್ಯಪಾನ ಮಾಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಎರಡು ಸಾವಿರ ಹಣ ನೀಡುವಂತೆ ಕಿರಣ್ ಕೇಳಿದ್ದಾನೆ ಹಣ ನೀಡಲು ಇಬ್ಬರೂ ಸ್ನೇಹಿತರು ನಿರಾಕರಿಸಿದ ಕಾರಣ ಸ್ನೇಹಿತರಾದ ಪ್ರಜ್ವಲ್ ಹಾಗೂ ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. 


ಆತ ನಡೆಸಿದ ಹಲ್ಲೆಯಿಂದ ಆಕ್ರೋಶಗೊಂಡ ಇನ್ನಿಬ್ಬರು ಕಿರಣ್ ಗೆ ಮದ್ಯಕುಡಿಸಿ ಮದ್ಯದ ಬಾಟಲಿಯಿಂದ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ್ದರು ಹಾಗೂ ಪ್ರಜ್ಞೆ ತಪ್ಪಿಬಿದ್ದಿದ್ದ ಆತನ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಹತ್ಯೆಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ. 

ತೀವ್ರ ಸ್ವರೂಪದ ಗಾಯ ಹಾಗೂ ರಕ್ತಸ್ರಾವದಿಂದ ಬಳಲಿದ್ದ ಕಿರಣ್ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಮಾರ್ಗದಲ್ಲಿ ಸಂಚಾರ ಮಾಡುವ ದಾರಿಹೋಕರು ಕೊಲೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹತ್ಯೆ ಮಾಡಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.