ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಗೋ ಹಂತಕರು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯನ್ನು ಪಡೆದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ನಗರಸಭಾ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿದೆ. 

ಚಿಕ್ಕಮಗಳೂರು ನಗರದ ತಮಿಳುಕಾಲೋನಿಯಲ್ಲಿ ಗೋ ಮಾಂಸ ಕಡಿದು ಮಾರಾಟ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸ್ ಇಲಾಖೆ ಹಾಗೂ ನಗರ ಸಭೆಯ ಸಹಯೋಗದೊಂದಿಗೆ ದಾಳಿ ನಡೆಸಿರುವ ಅಧಿಕಾರಿಗಳು ಗೋ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದೆ.  


ವಿದ್ಯುತ್ ಕಡಿತಗೊಳಿಸಿದ ನಗರಸಭೆ :

ಗೋಮಾಂಸವನ್ನು ಮಾರಾಟ ನಡೆಸುತ್ತಿದ್ದ ಸ್ಥಳದ ವಿದ್ಯುತ್ ನಿಲುಗಡೆಗೊಳಿಸುವಂತೆ ಈ ಸಂದರ್ಭದಲ್ಲಿ ಕೂಡಲೇ ನಗರಸಭಾ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ರವರು KEB ಅಧಿಕಾರಿವರ್ಗಕ್ಕೆ ಸೂಚಿಸಿದರು. ಸ್ಥಳಕ್ಕೆ ಬಂದ ಕೆಇಬಿ ಸಿಬ್ಬಂದಿಗಳನ್ನು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ಈ ಮೂಲಕವಾಗಿ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ನಗರಸಭೆ ಖಡಕ್ ಎಚ್ಚರಿಕೆಯನ್ನು ರವಾನಿಸಿತು. 

ಘಟನಾ ಸಂಬಂಧ ಮಾತನಾಡಿದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ತಂಡವು ಅನೇಕ ಬಾರಿ ಗೋಹತ್ಯಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು ಬಹುತೇಕ ಕೇಂದ್ರಗಳನ್ನು ನೆಲಸಮ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದವರನ್ನು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಹಾಗೂ ಮುಂದಿನ ದಿನಗಳಲ್ಲಿ ಈ ಗೋಹತ್ಯಾ ಕೇಂದ್ರದ ಜಾಗದ ಖಾತೆಯನ್ನು ರದ್ದುಗೊಳಿಸಿ ಅದನ್ನು ನಗರಸಭೆಯ ವಶಕ್ಕೆ ಪಡೆಯಲಾಗುವುದು ಎಂದರು. 

ಈ ಸಮಯದಲ್ಲಿ ನಗರಸಭಾ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು ಇದ್ದರು.