ಹಾಸನ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು, ಕೊಡಗು, ಹಾಸನ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಮಳೆಯ ತೀವ್ರತೆಗೆ ಮೇಲ್ಛಾವಣಿ ಸಮೇತ ಮನೆ ಕುಸಿದಿದೆ. 

ಹಾಸನದ ಅರಕಲಗೂಡು ತಾಲೂಕಿನ ಕೆಲಗಳಲೆ ಗ್ರಾಮದ ಅಪ್ಪಣ್ಣಗೌಡ ಹಾಗೂ ತಂಗ್ಯಮ್ಮ ಎಂಬುವವರಿಗೆ ಸೇರಿದ ಮನೆಗಳು ಮಳೆಯಿಂದಾಗಿ ಕುಸಿತ ಕಂಡಿದೆ. ಮನೆಯಲ್ಲಿದ್ದ ವಸ್ತುಗಳು ಹಾಗೂ ದವಸ ಧಾನ್ಯಗಳು ನಾಶವಾಗಿದ್ದು ಮನೆಯವರು ಅತೀವ ಆತಂಕಕ್ಕೊಳಗಾಗಿದ್ದಾರೆ. 


ಮಳೆಯ ಆರ್ಭಟಕ್ಕೆ ಈಗಾಗಲೇ ನಲುಗಿರುವ ಜನರು ಸರ್ಕಾರದ ಸೂಕ್ತ ಪರಿಹಾರ ಹಾಗೂ ವ್ಯವಸ್ಥೆಗೆ ಆಗ್ರಹಿಸಿದ್ದಾರೆ. ಮಳೆಯಿಂದಾಗಿ ಭಾರೀ ಪ್ರಮಾಣದ ಬೆಳೆಗಳು ಈಗಾಗಲೇ ನಾಶಗೊಂಡಿದ್ದು ಕೃಷಿಕರು ಸಹ ಕಂಗಾಲಾಗಿದ್ದಾರೆ ಮತ್ತು ಸೂಕ್ತ ಪರಿಹಾರಕ್ಕಾಗಿ ಸರ್ಕಾರವನ್ನು ಕೋರಿದ್ದಾರೆ.

ಭಾರೀ ಮಳೆಗೆ ಕೊಟ್ಟಿಗೆಹಾರ - ಬಣಕಲ್ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಗುಡ್ಡ ಕುಸಿತ 

ಚಿಕ್ಕಮಗಳೂರು : ಮಲೆನಾಡಿನಲ್ಲಿ  ಮಳೆಯ ಆರ್ಭಟ ಜೋರಾಗಿದ್ದು ಮೂಡಿಗೆರೆ ತಾಲ್ಲೂಕಿನಾದ್ಯಂತ ಬಾರಿ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮನೆಗಳ ಮೇಲೆ ಮರ ಬಿದ್ದು ಮನೆಗಳು ಹಾನಿಗೊಂಡಿದೆ, ಕೆಲವು ಮನೆಗಳು ಸಂಪೂರ್ಣವಾಗಿ ಕುಸಿತಗೊಂಡಿದೆ. ಮೂಡಿಗೆರೆ ತಾಲ್ಲೂಕಿನ ಗಬ್ಗಲ್, ಕೂವೆ, ನಿಡುವಾಳೆ, ಬಾಳೂರು, ಕೊಟ್ಟಿಗೆಹಾರ, ಬಣಕಲ್, ಕೋಳೂರು, ಬೆಟ್ಟಗೆರೆ ಮುಂತಾದ ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಳೆಯ ತೀವ್ರತೆಗೆ ಕೊಟ್ಟಿಗೆಹಾರ-ಬಣಕಲ್ ರಾಷ್ಟ್ರೀಯ ಹೆದ್ದಾರಿ ಪಕ್ಕವಿರುವ ಗುಡ್ಡಗಳು ಕುಸಿತಗೊಂಡಿದೆ. ಗುಡ್ಡ ಕುಸಿದ ಪರಿಣಾಮ ಮಣ್ಣು ರಸ್ತೆಯ ಇಕ್ಕೆಲಗಳಲ್ಲಿ ಬಂದು ಬಿದ್ದಿದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂದಾಗಬಹುದಾದ ಅಪಾಯವನ್ನು ನಿಯಂತ್ರಿಸುವ ಸಲುವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಭಾಗದಲ್ಲಿ ಇನ್ನೂ ಮಳೆಯಾಗುತ್ತಲೇ ಇದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.


ಹೇಮಾವತಿ, ಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು ಮಳೆಯ ತೀವ್ರತೆಗೆ ಮೂಡಿಗೆರೆ ಭಾಗದಲ್ಲಿ ಭಾರೀ ಪ್ರಮಾಣದ ಅವಘಡಗಳು ಸಂಭವಿಸಿದೆ. ಕೆಲವೆಡೆ ಸ್ಥಳೀಯರೇ ಮರಗಳನ್ನು ತೆರವುಮಾಡುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ತೆರವು ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.