ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ತೀವ್ರ ಸ್ವರೂಪದ ಕೋಮು ಗಲಭೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗದಲ್ಲಿ ಕೋಮು ಸೌಹಾರ್ದತೆ ಸಹ ಕಾಣಸಿಕ್ಕಿದೆ. ಈ ಹಿಂದೆ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಯ ನಂತರ ತೀವ್ರ ಸ್ವರೂಪದ ಗಲಭೆ ಉಂಟಾಗಿದ್ದ ಶಿವಮೊಗ್ಗದಲ್ಲಿ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾದ ವಿವಾದ ಸಹ ಉಂಟಾಗಿತ್ತು, ಪ್ರೇಮ್ ಸಿಂಗ್ ಗೆ ಚೂರಿ ಇರಿದ ಬೆನ್ನಲ್ಲೇ ಮತ್ತೆ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ಪ್ರಸ್ತುತ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಜಯಪುರ: ಹೆಂಡತಿಯ ಕಾಟಕ್ಕೆ ಬೇಸತ್ತು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಗಂಡ

ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ಮುಸ್ಲಿಂ ಸಮುದಾಯದವರು ಭಾಗವಹಿಸಿ ಭಾವೈಕ್ಯತೆ ಮೆರೆದಿದ್ದರು. ಇದೀಗ ನಗರದ ಮಲವಗೊಪ್ಪದಲ್ಲಿ ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ದೇವಾಲಯ ಕಟ್ಟಿಸಿಕೊಡುವಂತೆ ಕಾಂಗ್ರೆಸ್ ವಕ್ತಾರೆ ಜಿ.ಪಲ್ಲವಿಯವರಿಗೆ ಮನವಿ ಮಾಡಿದ್ದಾನೆ, ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿದ್ದ ವಕ್ತಾರೆ ಬಳಿ ಮುಸ್ಲಿಂ ಯುವಕ ಮನವಿ ಮಾಡಿದ್ದು ಇದಕ್ಕೆ ಸ್ಥಳದಲ್ಲಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದೂಗಳು ಈ ಸುತ್ತಮುತ್ತಲಿನ ಭಾಗದಲ್ಲಿ ದೇವಾಲಯಕ್ಕೆ ಹೋಗಲು ಸಮೀಪವಾಗುವ ದೇವಸ್ಥಾನ ಇಲ್ಲ. ಹಾಗಾಗಿ ಸಮೀಪದಲ್ಲಿಯೇ ದೇವಾಲಯವೊಂದನ್ನು ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಆದ್ದರಿಂದ ದೇವಾಲಯವನ್ನು ಕಟ್ಟಿಕೊಡಬೇಕೆಂದು ಯುವಕ ಮನವಿ ಮಾಡಿದ್ದಾನೆ.

ನಮ್ಮ ಗ್ರಾಮದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೌಹಾರ್ದತೆಯಿಂದ ಎಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ನಡೆಸುತ್ತಿದ್ದೆವೆ. ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ಇದ್ದೇವೆ ಎಂದು ಈ ವೇಳೆ ಮಾತನಾಡಿದ್ದಾನೆ.