ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ವಾಹನಗಳಲ್ಲಿ ಅನಧಿಕೃತವಾಗಿ ಪ್ರೆಸ್ ಎಂಬ ಬೋರ್ಡ್ ಹಾಕಿಕೊಂಡಿರುವುದು ಕಂಡು ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಪತ್ರಕರ್ತರ ಸಂಘಕ್ಕೆ ಮಾಹಿತಿ ನೀಡಿ ಎಂದು ಮೂಡಿಗೆರೆ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶಿವಕಾಶಿ ಯು.ಆರ್ ತಿಳಿಸಿದರು.
ಈ ಕುರಿತಾಗಿ ಮೂಡಿಗೆರೆ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರಲ್ಲದೇಯಿರುವ ಅನೇಕರು ಅನಧಿಕೃತವಾಗಿ ವಾಹನಗಳಲ್ಲಿ ಪ್ರೆಸ್ ಬೋರ್ಡ್ ಹಾಕಿಕೊಂಡಿರುವುದು ಮತ್ತು ಯೆಲ್ಲೋ ಬೋರ್ಡ್ ವಾಹನದಲ್ಲಿ ಪ್ರೆಸ್ ಬೋರ್ಡ್ ಹಾಕಿಕೊಂಡು ಪತ್ರಕರ್ತರೆಂದು ಸುಳ್ಳು ಬಿಂಬಿಸಿಕೊಂಡು ಓಡಾಡುತ್ತಾ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸುಮ್ಮನೆ PRESS ಎಂದು ಬರೆಸಿಕೊಂಡು ಓಡಾಡಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮೂಡಿಗೆರೆ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ: ಚಿಕ್ಕಮಗಳೂರಿನಿಂದ ಬೆಂಗಳೂರಿನತ್ತ ವಿಶೇಷ ಹೆಲಿಕಾಪ್ಟರ್ ಮೂಲಕ ಸಾಗಿದ ಯುವತಿ ರಕ್ಷಿತಾಳ ಹೃದಯ
ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಪತ್ರಕರ್ತರಲ್ಲದೇ ಇದ್ದರೂ ಕೂಡ ನಕಲಿ ಪ್ರೆಸ್ ಐಡಿ ಹೊಂದಿರುವುದು ಮತ್ತು ವಾಹನಗಳಲ್ಲಿ ಅನಧಿಕೃತವಾಗಿ ಪ್ರೆಸ್ ಬೋರ್ಡ್ ಹಾಕಿಕೊಂಡಿರುವುದು ಕಂಡು ಬಂದರೆ ಸಾರ್ವಜನಿಕರು ಪತ್ರಕರ್ತರ ಸಂಘ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ. ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾದ ಉದಯಶಂಕರ್, ಸದಸ್ಯರಾದ ಪ್ರಸನ್ನ ಗೌಡಹಳ್ಳಿ, ನಂದೀಶ್ ಬಂಕೇನಹಳ್ಳಿ, ಸೊಮಶೇಖರ್, ಶಾರದಶೇಖರ್, ಆನಂದ್ ಕಣಚೂರು, ವಿಜಯಕುಮಾರ್, ಪ್ರವೀಣ್ ಪೂಜಾರಿ, ಸಂತೋಷ್ ಅತ್ತಿಗೆರೆ, ಪ್ರಕಾಶ್ ಬಿ.ಪಿ, ತನು ಕೊಟ್ಟಿಗೆಹಾರ, ನಯನ ತಳವಾರ, ಅಮರನಾಥ್, ಪ್ರಸನ್ನಕುಮಾರ್ ಇದ್ದರು.




0 Comments