ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ವಾರೆಂಟ್ ಜಾರಿಮಾಡಿ ಕೋರ್ಟ್ ಆದೇಶಿಸಿದೆ.

42ನೇ ACMM ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದು, ಮುಂದಿನ ತಿಂಗಳು 10ನೇ ತಾರೀಕು ಹಾಜರಾಗಲು ಆದೇಶಿಸಿದೆ.

ಚೆಕ್ ಬೌನ್ಸ್ ಪ್ರಕರಣದ ಆರೋಪಿಯಾಗಿರುವ MLA ಕುಮಾರಸ್ವಾಮಿ ಅವರ ಹೇಳಿಕೆ ದಾಖಲಿಸಲು ಈಗಾಗಲೇ ನೊಟೀಸ್ ನೀಡಲಾಗಿತ್ತು.

ಇದನ್ನೂ ಓದಿ: ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ


ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಪತ್ರಿಕಾ ವರದಿ ಕೋರ್ಟ್ ಗೆ ಸಲ್ಲಿಕೆ: 

ಪ್ರಕರಣದ ವಿಚಾರಣೆಗೆ ರಿಲೀಫ್ ಕೋರಿ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಅನಾರೋಗ್ಯದ ಕಾರಣ ನೀಡಿ, ಸಿಆರ್‌ಪಿಸಿ 317 ರ ಅಡಿ ವೈದ್ಯಕೀಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅರ್ಜಿದಾರ ಹೂವಪ್ಪ ಗೌಡ ದಾಖಲೆ ಸಮೇತ ಆಕ್ಷೇಪಣೆ ಸಲ್ಲಿಸಿದ್ದರು. ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ದಿನಪತ್ರಿಕೆ ವರದಿಗಳು ಪೋಟೋಗಳ ಸಹಿತವಾಗಿ ಕೋರ್ಟ್ ಗೆ ದಾಖಲೆ ಸಲ್ಲಿಸಲಾಗಿತ್ತು.

ಶಾಸಕ ಕುಮಾರಸ್ವಾಮಿ ಅನಾರೋಗ್ಯದ ನೆಪವೊಡ್ಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಕೋರ್ಟ್, ಕುಮಾರಸ್ವಾಮಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿ ಆದೇಶಿಸಿದೆ.