ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮಾಜಿ ಕಾಂಗ್ರೆಸ್ ನ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮ ಅವರು ಹಾಕಿದ ಪೋಸ್ಟ್ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೊಳಗಾಗಿದೆ.

ಕಳೆದ ಎರಡು ದಿನದ ಹಿಂದೆ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮ ಅವರು ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಪಾದಪೂಜೆ ಮಾಡಿ ಫೇಸ್ಬುಕ್ ನಲ್ಲಿ ‘ಅವಧೂತರಾದ ಶ್ರೀ ಶ್ರೀ ವಿನಯ ಗುರೂಜಿಯವರು ಇಂದು ನಮ್ಮ ಮನೆಗೆ ಭೇಟಿ ನೀಡಿದ್ರು. ಆ ವೇಳೆ ಗುರೂಜಿಯವರ ದಿವ್ಯ ಆಶೀರ್ವಾದ ಪಡೆದು ಧನ್ಯಳಾದೆ’ ಎಂದು ವಿನಯ್ ಗುರೂಜಿ ಅವರ ಪಾದಪೂಜೆ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೆಂಬಲಿಗರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಅಕ್ಕನನ್ನು ಹತ್ಯೆಗೈದು, ಲಾಡ್ಜ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ


ಇದು ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ಧ’

ವಿನಯ್ ಗುರೂಜಿ ಪಾದಪೂಜೆಯ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಕೆಲ ಬೆಂಬಲಿಗರು ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಇದು ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ಧವಾಗಿದ್ಷು, ನಿಮಗೂ ಹಾಗೂ ಭಕ್ತರಿಗೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಇನ್ನು ಮುಂದೆ ನೀವು ಅಂಬೇಡ್ಕರ್ ಅನುಯಾಯಿಗಳು ಎಂದು ಹೇಳಿಕೊಂಡು ತಿರುಗಾಡಬೇಡಿ ಜನರಿಗೆ ಜೋಕ್ಸ್ ಇಷ್ಟ ಅಗಲ್ಲ ಎಂದು ಕಾಲೆಳಿದಿದ್ದಾರೆ.

ನಿಮ್ಮ ತಾಯಿ ಹುದ್ದೆ ಅನುಭವಿಸಿರುವುದು ಅಂಬೇಡ್ಕರ್ ಬರೆದ ಸಂವಿಧಾನದಿಂದ ಹೊರತು ಇಂತಹ ನಕಲಿ ಸ್ವಾಮಿಯಿಂದಲ್ಲ

ನಯನ ಮೋಟಮ್ಮ ಸದ್ಯ ಮೂಡಿಗೆರೆ ಕ್ಷೇತ್ರದಲ್ಲಿ ಸಾಕಷ್ಟು ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದು, ಈಗ ಸ್ವಪಕ್ಷೀಯರಿಂದಲೇ ನಯನ ಅವರ ನಡೆಗೆ ಬೇಸರ ವ್ಯಕ್ತವಾಗಿದೆ. ನಿಮ್ಮಂತಹ ವಿದ್ಯಾವಂತರೇ ಹೀಗೆ ಮಾಡಿದರೆ ಹೇಗೆ? ಸ್ವಲ್ಪ ಚೈಚಾರಿಕತೆಯನ್ನು ಬೆಳೆಸಿಕೊಳ್ಳಿ.. ನಿಮ್ಮ ತಾಯಿ ಮೊಟಮ್ಮರವರು ಕೆಲವು ಹುದ್ದೆಗಳು ಅನುಭವಿಸಿರುವುದು ಬಾಬಾ ಸಾಹೇಬರು ಬರೆದ ಸಂವಿಧಾನದಿಂದ ಇಂತಹ ನಕಲಿ ಸ್ವಾಮಿಯಿಂದಲ್ಲ ನಿಮ್ಮಂತ ವಿದ್ಯಾವಂತರೇ ಈ ರೀತಿ ನಡೆದುಕೊಂಡರೆ ನಿಮ್ಮ ಹಿಂದೆ ಬಂದಂತವರಿಗೆ ಯಾವ ರೀತಿ ಎಂದು ಪ್ರಶ್ನಿಸಿದ್ದಾರೆ.

ಟೀಕಿಸಿದವರಿಗೆ ಅಂಬೇಡ್ಕರ್ ರ ಪಾಠ ಮಾಡಿದ ನಯನ

ಇನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳು ಹೆಚ್ಚಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯಿಸಿರುವ ನಯನ, ನಿಮ್ಮೆಲ್ಲಾ ಸಲಹೆ, ಟೀಕೆ, ಟಿಪ್ಪಣಿಗಳಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಆದರೆ ಟೀಕೆ ಮಾಡಲು ನಿಮೆಗೆಷ್ಟು ಹಕ್ಕಿದೆಯೋ ಹಾಗೆಯೇ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತ ಪಡಿಸುವ ಅಷ್ಟೇ ಹಕ್ಕು ನನಗೂ ಇದೆ. ಧಾರ್ಮಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಮ್ಮ ಅಂಬೇಡ್ಕರರೇ ಕೊಟ್ಟಿದ್ದಾರೆಂಬುದು ನಿಮಗೆ ತಿಳಿದಿರಲಿ‌ ಎಂದಿದ್ದಾರೆ.

‘ದಲಿತರು ಒಂದೇ ಚೌಕಟ್ಟಿನಲ್ಲಿ ಬದುಕಿ ಎಂದು ಅಂಬೇಡ್ಕರ್ ಹೇಳಿಲ್ಲ’

ಇನ್ನು ಕೆಲವರು ದಲಿತರಾಗಿ ನೀವು ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ದವಾಗಿ ನಡುದುಕೊಂಡಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಖಡಕ್ ಆಗಿಯೇ ಅಭಿಪ್ರಾಯ ಹಂಚಿಕೊಂಡಿರುವ ನಯನ ‘ದಲಿತರು ಒಂದೇ ಚೌಕಟ್ಟಿನಲ್ಲಿ ಬದುಕಿ ಎಂದು ಎಲ್ಲಿಯೂ ಅಂಬೇಡ್ಕರರು ಹೇಳಿಲ್ಲ. ಸ್ವತಂತ್ರರಾಗಿರಲಿ ಎಂದು ಅವರು ಬಯಸಿದ್ರು ಆ ಸ್ವಾತಂತ್ರ್ಯ ನನಗೆ ಸಿಕ್ಕಿದೆ. ನಾನು ಪ್ರಜ್ಞಾವಂತ ಪ್ರಜೆಯಾಗಿ ನಾನು ನನ್ನ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದೇನೆ. ನೀವು ನಿಮ್ಮ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳಿ ಬಹುಶಃ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬರೆದುಕೊಂಡಿದ್ದಾರೆ.

ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ಧ ಎಂದವರಿಗೆ ಸಂವಿಧಾನದ ಪಾಠ

ಇನ್ನು ಕೆಲವರು ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು. ಪಾದಪೂಜೆಯಂತ ಮೌಡ್ಯದಿಂದ ಹೊರಬನ್ನಿ ಎಂದಿದ್ದಾರೆ. ತಮ್ಮ ವಿರುದ್ಧ ನಡೆದ ಟೀಕಾ ಪ್ರಹಾರಕ್ಕೆ ಸರಣಿ ಪೋಸ್ಟ್ ಗಳ ಮೂಲಕ ಉತ್ತರ ನೀಡಿರುವ ನಯನ ‘ಅಂಬೇಡ್ಕರರು ಕೊಟ್ಟಿರುವ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ Right to practice religion ಧಾರ್ಮಿಕ ಹಕ್ಕಿನ ಸತ್ವವನ್ನು ಅರ್ಥಮಾಡಿಕೊಳ್ಳಲು ಎಡವಿದ್ದೀರಿ ಎಂದು ಭಾವಿಸುತ್ತೇನೆ. ಅಲ್ಲದೇ, ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಜ್ಞಾನ ಅಥವಾ ಪರಿಜ್ಞಾನ ಇದೆ ಅನ್ನೋ ಸಣ್ಣ ವಿಚಾರವನ್ನ ತಿಳಿದುಕೊಳ್ಳಲು ಪ್ರಯತ್ನಿಸಿ ಎಂದಿದ್ದಾರೆ.