ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಆದಿಗುರು ಶಂಕರಾಚಾರ್ಯರಿಂದ ಸ್ಥಾಪಿತಗೊಂಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ದೇವಿಯ ದರ್ಶನವನ್ನು ಪಡೆಯಲು ಭಕ್ತರು ವಿವಿಧೆಡೆಗಳಿಂದ ಗಿರಿಶಿಖರಗಳ ತಪ್ಪಲಿನಲ್ಲಿರುವ ಶೃಂಗೇರಿಗೆ ಆಗಮಿಸುತ್ತಿದ್ದಾರೆ. 

ಇಂದು ದೇವಿ ಶಾರದೆಯು ಜಗನ್ಮೋಹಿನಿ ಅಲಂಕಾರದಲ್ಲಿ ಅಲಂಕೃತಗೊಂಡು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ರತ್ನಖಚಿತ ಆಭರಣಗಳನ್ನು ದೇವಿಗೆ ಧರಿಸಲಾಗಿದ್ದು, ಕೈಯಲ್ಲಿ ಸ್ವರ್ಣದ ಕಳಶಹಿಡಿದು ದೇವಿಯು ನಾಟ್ಯ ಭಂಗಿಯಲ್ಲಿ ನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.

ಇದನ್ನೂ ಓದಿ: ಕೊಪ್ಪ: ದಸರಾ ರಜೆಗಾಗಿ ಶಾಲೆಯಲ್ಲಿ ಪ್ರತಿಭಟಿಸಿದ ಪೋಷಕರು


ಆಭರಣಗಳಿಂದ ಕಂಗೊಳಿಸುತ್ತಿರುವ ದೇವಿಯನ್ನು ಕಂಡು ಭಕ್ತಿ ಪರವಶರಾಗಿ, ಮೈಮರೆತು ಭಕ್ತರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಶ್ರೀ ಮಠದ ಆವರಣದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಎಲ್ಲಾ ಕಾರ್ಯಗಳಲ್ಲಿ ಭಕ್ತರು ಭಾಗಿಯಾಗುತ್ತಿದ್ದಾರೆ. 

ಮಳೆಯ ಮಧ್ಯೆಯೂ ನಡೆದ ಸಂಜೆಯ ಬೀದಿ ಉತ್ಸವ:  

ನಿನ್ನೆ ಸಂಜೆ ಬೀದಿ ಉತ್ಸವ ನಡೆಯುವ ವೇಳೆ, ಮಳೆಬಂದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಮಳೆಯನ್ನೂ ಲೆಕ್ಕಿಸದೇ ಭಜನೆ ಮಾಡುತ್ತಾ, ಉತ್ಸವದಲ್ಲಿ ಪಾಲ್ಗೊಂಡರು. ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದು ವಿವಿಧ ಟ್ಯಾಬ್ಲೋ ಗಳನ್ನು ಸಿದ್ಧಪಡಿಸಿಕೊಂಡು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ದೇವತೆಗಳ ವೇಷದಲ್ಲಿದ್ದ ಮಕ್ಕಳು ಮಳೆಬಂದರೂ ಅದನ್ನು ಲೆಕ್ಕಿಸದೇ ಅದೇ ಭಂಗಿಯಲ್ಲಿ, ವೇಷದಲ್ಲಿ ತಾವಿದ್ದ ವಾಹನದಿಂದ ಕೆಳಗಿಳಿಯದೇ ಇದ್ದದ್ದು ಅತ್ಯಂತ ವಿಶೇಷವಾಗಿತ್ತು.


ಇಂದೂ ಕೂಡ ದೇವಿಯ ರಾಜಬೀದಿ ಉತ್ಸವ ನಡೆಯಲಿದ್ದು, ಪಟ್ಟಣದ ಭಾರತೀ ಬೀದಿ ಹಾಗೂ ಹರಿಹರಬೀದಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು ಶೃಂಗೇರಿಯ ಗಾಂಧಿ ಮೈದಾನದಲ್ಲಿರುವ EXHIBITION ಕೂಡ ಜನರನ್ನು ಆಕರ್ಷಿಸುತ್ತಿದೆ.