ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಸುವೊಂದನ್ನು ಗುಂಡಿಟ್ಟು ಕೊಂದ ಹೇಯ ಕೃತ್ಯ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೂಕ ಪ್ರಾಣಿ ಹಸುವನ್ನು ರಸ್ತೆಯ ಸಮೀಪದಲ್ಲಿ ಗುಂಡಿಟ್ಟು ಕೊಂದ ಆರೋಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಗೋಹತ್ಯೆಯ ವಿರುದ್ಧವಾಗಿ ಬಲವಾದ ಕಾನೂನುಗಳು ಜಾರಿಯಲ್ಲಿದ್ದರೂ  ಕೂಡ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಎಗ್ಗಿಲ್ಲದೇ ಗೋಹತ್ಯೆ ನಡೆಯುತ್ತಲೇ ಇದೆ. ಎಷ್ಟೇ ಕಠಿಣ ಶಿಕ್ಷೆ, ಕಾನೂನು ಕ್ರಮಗಳು ಜಾರಿಯಾದರು ಕೂಡ ಗೋಹಂತಕರು ತಮ್ಮ ಕೃತ್ಯವನ್ನು ಮುಂದುವರೆಸುತ್ತಲೇ ಇದ್ದಾರೆ.

ಚಿಕ್ಕಮಗಳೂರಿನ ಸೀತಾಳಯ್ಯನಗಿರಿಗೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಸ್ಕಾರ್ಪಿಯೋ ಕಾರಿನಲ್ಲಿ ಬಂದ ಗುಂಪೊಂದು ಈ ಘಟನೆಯನ್ನು ಎಸಗಿರುವ ಕುರಿತಾಗಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇರೆ ಪ್ರಾಣಿ ಎಂದುಕೊಂಡು ಹಸುವನ್ನು ಕೊಂದಿದ್ದಾರೋ ಅಥವಾ ಬೇಕೆಂದೇ ಹಸುವನ್ನು ಗುಂಡಿಕ್ಕಿ ಕೊಲ್ಲಲಾಗಿದೆಯೋ ಎಂಬ ಅಂಶವು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. 

ಹಸುವಿಗೆ ಗುಂಡು ಹಾರಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ವಾಹನದ ಸಂಖ್ಯೆಯನ್ನು ನಮೂದಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ಸ್ಥಳ ಪರಿಶೀಲನೆ ಮಾಡಿದ್ದಾರೆ.