ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿಯ ಜಾತ್ರಾ ಮಹೋತ್ಸವ ಏಪ್ರಿಲ್ ಎಂಟನೇ ತಾರೀಖಿಗೆ ನಿಗದಿಯಾಗಿದ್ದು, ಈ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಬಾರದು ಎಂಬ ಮನವಿಯನ್ನು ಹಿಂದೂ ಸಂಘಟನೆಗಳ ಮುಖಂಡರು ಈ ಹಿಂದೆ ನೀಡಿದ್ದರು. ಮನವಿ ಗ್ರಾ.ಪಂ ಸ್ಪಂದಿಸಿಲ್ಲ ಎಂದು ಕಿಗ್ಗಾ ಚಲೋ ಅಭಿಯಾನ ಕೂಡ ನಡೆದಿತ್ತು.

ಇದನ್ನೂ ಓದಿ : ವಿಶಾಲ್ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ

ಈ ಬಳಿಕ ಗ್ರಾಮ ಪಂಚಾಯತ್ ಸರ್ವ ಸದಸ್ಯರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರು ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಹಾಗೂ ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರೊಂದಿಗೆ ಈ ಕುರಿತು ವಿಷಯ ತಿಳಿಸಿ ಕಾನೂನಿನ ಅಡಿಯಲ್ಲಿ ಇರುವ ನಿಯಮಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ. ಅನ್ಯಧರ್ಮೀಯರಿಗೆ ವ್ಯಾಪಾರ ಅಥವಾ ಇನ್ನಿತರ ಕಾರ್ಯಗಳಿಗೆ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ನಿರ್ಬಂಧ ಇರುವುದು ಕೇವಲ ದೇವಸ್ಥಾನಕ್ಕೆ ಒಳಪಡುವ ಜಾಗಗಳಿಗೆ ಹೊರತು ಗ್ರಾಮ ಠಾಣಾ ವ್ಯಾಪ್ತಿಗೆ ಅಲ್ಲ ಈ ಕಾರಣದಿಂದಾಗಿ ಅಂಗಡಿಯನ್ನಿಡಲಿಚ್ಚಿಸುವ ಅರ್ಜಿದಾರರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಹುದು ಎಂಬ ಸೂಚನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಅಂತೆಯೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮರ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಣಿ ಅವರು ತಿಳಿಸಿದ್ದಾರೆ.

ನಾಮಕಾವಸ್ಥೆಗೆ ಗ್ರಾಮ ಸಭೆ;

ಹಿಂದೂ ಸಂಘಟನೆಗಳು ಕರೆ ಕೊಟ್ಟ ಕಿಗ್ಗಾ ಚಲೋದಲ್ಲಿ ಅಧ್ಯಕ್ಷರು ಸರ್ವ ಸದಸ್ಯರನ್ನು ಹಾಗೂ ಗ್ರಾಮಸ್ಥರನ್ನು ಕರೆದು ಇಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಇಂದು ನಿಗದಿಯಾಗಿ ರದ್ದಾದ ಗ್ರಾಮ ಸಭೆಯ ಕುರಿತು ಯಾವುದೇ ಮಾಹಿತಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗಿರಲಿಲ್ಲ. ಇದಲ್ಲದೇ ಪಂಚಾಯತ್ ನ ಕೇವಲ ಐವರು ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಾಗಿದ್ದರು. ಕಾದು ಕಾದು ಸುಸ್ತಾದ ಗ್ರಾಮಸ್ಥರು ಕೊನೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಂದ ನಂತರ ಕೈಗೊಂಡ ನಿರ್ಣಯವನ್ನು ತಿಳಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೆನ್ನೆ ಸಂಜೆ ಈ ಕುರಿತು ಸದಸ್ಯರುಗಳಿಗೆ ಕಾರ್ಯದರ್ಶಿಗಳ ಮೂಲಕ ಮಾಹಿತಿ ತಿಳಿಸುವಂತೆ ಹೇಳಲಾಗಿತ್ತು ಎಂದಿದ್ದಾರೆ.

ಹಿಂದೂ ಜಾಗೃತನಾಗಿದ್ದಾನೆ’ - ತೆರವು ಮಾಡಿದ್ದ ಜಾಗದಲ್ಲೇ ಬ್ಯಾನರ್ ಹಾಕಿದ ಹಿಂದೂಪರ ಸಂಘಟನೆ :

ಈ ಮಧ್ಯೆ ಇತ್ತೀಚೆಗಷ್ಟೇ ಊರಿನ ಗ್ರಾಮಸ್ಥರು ಹಾಗೂ ಹಿಂದೂಪರ ಸಂಘಟನೆಗಳು ಹಾಕಿದ್ದ ಅನ್ಯ ಧರ್ಮೀಯರಿಗೆ ಈ ಜಾತ್ರೆಯಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ನ್ನು ಗ್ರಾಮ ಪಂಚಾಯತ್ ನವರು ಆ ಸ್ಥಳದಿಂದ ತೆರವುಗೊಳಿಸಿದ್ದರು. ಇಂದು ಪುನಃ ಅದೇ ಜಾಗದಲ್ಲಿ ಸ್ಥಳೀಯರು ಬೇರೆ ಬ್ಯಾನರ್ ಗಳನ್ನು ಪಂಚಾಯತ್ ಅನುಮತಿ ಪಡೆದು ಹಾಕಿದ್ದಾರೆ. 

ನೀವು ಜನಿವಾರ ತೆಗೆದು ಬನ್ನಿ ನಾವು ಹಿಜಾಬ್ ತೆಗೆದು ಬರುತ್ತೇವೆ ಎಂದು ಆತ ಕಮೆಂಟ್ ಮಾಡಿದ್ದರ ಬಳಿಕವೇ ಹಿಂದೂ ಯುವಕರ ಭಾವನೆಗಳು ಕೆರಳಿವೆ. ಈ ರೀತಿ ಹಿಂದುಗಳ ಭಾವನೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವುದು ತಪ್ಪು - ನೂತನ್ ಕುಮಾರ್, ಬಿಜೆಪಿ ಮುಖಂಡ

ಕಿಡಿ ಹಚ್ಚಿಸಿತೇ ಅಬ್ಬಾಸ್ ಕಿಗ್ಗಾ ಹಾಕಿದ್ದ ಅವಹೇಳನಾಕಾರಿ ಪೋಸ್ಟ್?

ಅನೇಕ ದಶಕಗಳಿಂದ ಕಿಗ್ಗಾದಲ್ಲಿ ಖುಷ್ಯಶೃಂಗ ಸ್ವಾಮಿ ದೇವಸ್ಥಾನದ ಜಾತ್ರಾ ಮಾಹೋತ್ಸವ ನಡೆಯುತ್ತಿದೆ. ಆದರೆ ಎಲ್ಲೂ ಕೋಮು ಭಾವನೆಗೆ ಧಕ್ಕೆ ತರುವಂತದ್ದಾಗಲಿ, ಹಿಂದೂಯೇತರರಿಗೆ ಅಂಗಡಿ ನೀಡಬೇಡಿ ಎಂಬ ಕೂಗು ಕೇಳಿ ಬಂದಿರಲಿಲ್ಲ. ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಘರ್ಷಣೆ, ಹೈ ಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಂ ವ್ಯಾಪಾರಿಗಳು ಬಂದ್ ಮಾಡಿದ್ದೂ ಸಹ ಅಷ್ಟರ ಮಟ್ಟಿಗೆ ಕಿಗ್ಗಾ ಜಾತ್ರೆಗೆ ಪರಿಣಾಮ ಬೀರಿರಲಿಲ್ಲ.

ಆದರೆ ಫೇಸ್ಬುಕ್ ನಲ್ಲಿ ಅಬ್ಬಾಸ್ ಕಿಗ್ಗಾ ಎಂಬುವವರು ಹಾಕಿದ ಒಂದು ಪೋಸ್ಟ್ ಇಂದು ಇಡೀ ಕಿಗ್ಗವಷ್ಟೇ ಅಲ್ಲದೆ ಶೃಂಗೇರಿಯಲ್ಲೂ ಮುಸ್ಲಿಂ ಅಂಗಡಿ ನಿಷೇಧಿಸಬೇಕು ಎಂಬ ಕಿಚ್ಚು ಹಬ್ಬಿಸಿದೆ ಎಂದು ಆರೋಪಿಸಿದ್ದಾರೆ. ಅಬ್ಬಾಸ್ ಮೂಲತಃ ಕಿಗ್ಗಾದವರು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು. ‘ಮುಂದಿನ ಬಾರಿ ನಿಮ್ಮ ಜನಿವಾರ ಹಾಗೂ ನಮ್ಮ ಬುರ್ಕಾ ಎರಡು ತೆಗೆದಿಟ್ಟು ಶಾಲೆಗೆ ಹೋಗೋಣ.ಪಾಪ ಬರೀ ಬುರ್ಕಾ ತೆಗೆದಿಟ್ಟು ನೀವು ಮಾತ್ರ ಧರ್ಮಾಂಧರಾಗೋದು ಬೇಡ’ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ ಭಾರೀ ಟೀಕೆಗೆ ಒಳಗಾಗಿತ್ತು. ಎಲ್ಲೋ ಬೆಂಗಳೂರಿನಲ್ಲಿ ಕುಳಿತು ಮಾಡಿದ ಒಂದು ಪೋಸ್ಟ್ ಗೆ ಈಗ ಅನ್ಯೋನ್ಯತೆಯಿಂದಿದ್ದ ಇಡೀ ಕಿಗ್ಗಾ ಗ್ರಾಮಸ್ಥರ ನಡುವೆ ಬಿರುಕು ಮೂಡಿದಂತಾಗಿದೆ ಎಂದು ನಿಷೇದಕ್ಕೆ ಒತ್ತಾಯಿಸುತ್ತಿರುವವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರದ ಕುರಿತಾಗಿ ಹಲವೆಡೆ ಹೆಚ್ಚಿನ ವಿರೋಧವಿದ್ದು ಭಾರತ ಸಂವಿಧಾನಕ್ಕೆ ಗೌರವ ನೀಡದೆ ಅಗೌರವ ವ್ಯಕ್ತಪಡಿಸುವ ಈ ದೇಶದ ಕಾನೂನನ್ನು ಒಪ್ಪದವರಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎಂಬ ಅಭಿಯಾನದ ಕೂಗು ಕೇಳಿಬಂದಿದೆ. ಜಾತ್ರೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ, ಪರ ವಿರೋಧದ ನಡುವೆ ಜಾತ್ರೆಯಾವ ರೀತಿಯಲ್ಲಿ ಸಾಗಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.